ಚಾಮರಾಜನಗರ:ಕೋವಿಡ್–೧೯ ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರವನ್ನು ಕಾಡಿದ ಕೊರೋನಾ ವೈರಸ್ ಪತ್ರಿಕೋದ್ಯಮವನ್ನೂ ಬಿಟ್ಟಿಲ್ಲ. ಇಷ್ಟೆಲ್ಲ ಕಷ್ಟದ ನಡುವೆಯೇ ಪ್ರತಿದಿನ ದಿನಪತ್ರಿಕೆಗಳು ಮುದ್ರಣಗೊಂಡು ಓದುಗರ ಕೈ ಸೇರುತ್ತಿದ್ದವು. ಸವಾಲು, ಸಂಕಷ್ಟಗಳ ನಡುವೆ ಪತ್ರಿಕಾ ವಿತರಕರು ಛಲ ಬಿಡದೆ, ತಮ್ಮ ಕಾರ್ಯವನ್ನು ಮುಂದುವರಿಸುತ್ತಾ ಬಂದಿದ್ದಾರೆ.
ಪತ್ರಿಕೆಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂಬ ಸುಳ್ಳು ಸುದ್ದಿ ಹರಡಿದ ನಂತರ, ‘ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ’ ಎಂದು ಓದುಗರ ಮನವೊಲಿಸುವುದರಲ್ಲಿ ವಿತರಕರು ಯಶಸ್ವಿಯಾಗಿದ್ದರು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು ತಮ್ಮ ಕೆಲಸ ಮಾಡಿದ್ದರು.
ಲಾಕ್ ಡೌನ್ ಹಾಗೂ ಕೋವಿಡ್ ಕಾಲದಲ್ಲಿ ತಾವು ಎದುರಿಸಿದ ಕಷ್ಟಗಳು ಹಾಗೂ ಸವಾಲುಗಳನ್ನು ಏಜೆಂಟರು ಮತ್ತು ವಿತರಕರು ತೆರೆದಿಟ್ಟ ಕಟು ಸತ್ಯವಿದು.
ನನ್ನ ಪತ್ರಿಕಾ ವಿತರಣೆಯ ಅನುಭವದಲ್ಲಿ ಇದುವರೆಗೆ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಭಾರಿ ಕಷ್ಟ ಆಯಿತು. ನಮ್ಮಲ್ಲೂ ಭಯ ಇತ್ತು. ಆದರೆ, ನನ್ನ ಕೆಲಸವನ್ನು ಮಾಡಲೇಬೇಕಿತ್ತು. ಮನೆ ಮನೆಗೆ ಪತ್ರಿಕೆಗಳನ್ನು ಹಾಕಲು ಹುಡುಗರು ಬರುತ್ತಿರಲಿಲ್ಲ. ಅವರ ಪೋಷಕರು ಬಿಡುತ್ತಿರಲಿಲ್ಲ. ನಾನೇ ಹಾಕಬೇಕಾಯಿತು. ನನ್ನ ಮನೆಯ ಸದಸ್ಯರು ಕೂಡ ಕೆಲಸ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಕೊಳ್ಳೇಗಾಲದ ಏಜೆಂಟ್ ಹಾಗೂ ವಿತರಕ ಶಾಂತರಾಜು ತಿಳಿಸಿದರು.