ತುಮಕೂರು: ಹತ್ತು ವರ್ಷಗಳ ಹಿಂದೆಯೇ ನಿರ್ಮಾಣವಾದ 700 ಕೆ.ಜಿ. ತೂಕದ ಶ್ರೀ ಶಿವಕುಮಾರ ಶ್ರೀಗಳ ಕಂಚಿನ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು.
ತ್ರಿವಿಧ ದಾಸೋಹಿ, ಶತಾಯುಷಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಾರಾಧನೆಯ ದಿನವಾದ ಇಂದು ಅವರ ಕಂಚಿನ ಪ್ರತಿಮೆ ವಿಶೇಷ ಆಕರ್ಷಣೆಯಾಗಿತ್ತು.
ಸಿದ್ಧಗಂಗಾಮಠದ ಪಕ್ಕದಲ್ಲಿ ನಿರ್ಮಿಸಲಾಗಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸುಮಾರು 5.6 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ. ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪ ಶ್ರೀಗಳ ಕಂಚಿನ ಪ್ರತಿಮೆಯನ್ನು ಐದು ವರ್ಷಗಳ ಹಿಂದೆಯೇ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲು ನೀಡಿದ್ದರು.
ಆದರೆ, ಪ್ರತಿಮೆ ಪ್ರತಿಷ್ಠಾಪನೆಗೆ ಸ್ವತಃ ಶ್ರೀ ಶಿವಕುಮಾರ ಸ್ವಾಮೀಜಿಯವರೇ ವಿರೋಧಿಸಿದ್ದರು. ಪ್ರತಿಮೆಯನ್ನು ಮಠಕ್ಕೆ ತರದಂತೆ ಆದೇಶಿಸಿದ್ದರು. ನಾನೇ ಇರಬೇಕಾದರೆ ಪ್ರತಿಮೆ ಯಾಕೆ ಎಂದು ಸ್ವಾಮೀಜಿ ಕೋಪ ವ್ಯಕ್ತಪಡಿಸಿದ್ದರು. ಇದರಿಂದ ಮಠದ ಆವರಣದಲ್ಲಿನ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡುವ ಜಾಗದಲ್ಲಿ ಮಂಟಪದ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿತ್ತು.
ಹೀಗಾಗಿ ಪ್ರತಿಮೆಯನ್ನು ಎಸ್ಐಟಿ ಕಾಲೇಜಿನ ಕೊಠಡಿಯಲ್ಲಿ ಮಠದ ಸಿಬ್ಬಂದಿ ಇರಿಸಿದ್ದರು. ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮೊದಲ ಬಾರಿ ಪ್ರತಿಮೆಯನ್ನು ಮಠಕ್ಕೆ ತಂದು ಪುಣ್ಯಸ್ಮರಣೆ ವೇದಿಕೆಯಲ್ಲಿಡಲಾಗಿದೆ. ಸ್ವಾಮೀಜಿ ಎತ್ತರಕ್ಕೆ ಸರಿಸಮನಾದ ಸುಮಾರು 700 ಕೆಜಿ ತೂಕದ ಪ್ರತಿಮೆಯ ದರ್ಶನ, ಮಠಕ್ಕೆ ಆಗಮಿಸುತ್ತಿರುವ ಭಕ್ತರಿಗೆ ದೊರೆಯಲಿದೆ.