ದಾವಣಗೆರೆ, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಫಲಿತಾಂಶದ ಪ್ರಭಾವ ರಾಜ್ಯ ಸರ್ಕಾರದ ಮೇಲೆ ಬೀರದು. ಆದರೂ ಕಾದುನೋಡಬೇಕು ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ
ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರದು. ಆದರೆ ಹೇಳಲಿಕ್ಕೂ ಆಗದು, ಯಾವುದಕ್ಕೂ ಒಂದು ವಾರ ಕಾದು ನೋಡೋಣ. ಓಡಿ ಹೋಗುವವರು ಹೋಗುತ್ತಾರೆ. ಅವರನ್ನೇನೂ ತಡೆ ಹಿಡಿಯಲು ಆಗುತ್ತಾ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಷ್ಟೊಂದು ಹೀನಾಯವಾಗಿ ಸೋಲುತ್ತದೆ ಎಂಬ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು. ಜನರು ಬಿಜೆಪಿಯವರಿಗೆ ಆಶೀರ್ವಾದ ಮಾಡಿದ್ದಾರೆ. ಮತದಾರರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಈಗ ಅವರದ್ದು ಕಾಲ. ಮತ್ತೆ ನಮಗೂ ಕಾಲ ಬರುತ್ತದೆ ಎಂದು ಹೇಳಿದ ಅವರು, ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಬಿಜೆಪಿಯವರು ಹಣ ಹಂಚಿದ್ದೇ ಕಾರಣ ಎಂದು ವಿಶ್ಲೇಷಿಸಿದರು.