ರಾಂಚಿ, ಏ. 15, ನ್ಯೂಸ್ ಎಕ್ಸ್ ಪ್ರೆಸ್: (ಪಿಟಿಐ)- ನಕ್ಸಲ್ ಹಿಂಸಾಚಾರ ಪೀಡಿತ ಜಾರ್ಖಂಡ್ ಗಿರಿಧಿ ಜಿಲ್ಲೆಯಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ 3 ಮಾವೋವಾದಿಗಳು ಹತರಾಗಿದ್ದು, ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಗಿರಿಧಿ ಜಿಲ್ಲೆಯ ಬೆಲ್ಭಾಘಾಟ್ ಪ್ರದೇಶದ ಅರಣ್ಯದಲ್ಲಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಸಿಆರ್ಪಿಎಫ್ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ನ 7ನೆ ಬೆಟಾಲಿಯನ್ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್ಕೌಂಟರ್ ನಡೆಯಿತು. ಈ ಸ್ಥಳವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 185 ಕಿಮೀ ದೂರದಲ್ಲಿದೆ.
ಯೋಧರು ತಮ್ಮ ಬಳಿ ಸಮೀಪಿಸುತ್ತಿದ್ದಂತೆ ಮರೆಯಲ್ಲಿ ಅಡಗಿದ್ದ ಮಾವೋವಾದಿ ಬಂಡುಕೋರರು ಗುಂಡು ಹಾರಿಸಿದರು. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದಾಗ ಎನ್ಕೌಂಟರ್ ನಡೆಯಿತು.