ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಕಾಂಪೌಂಡ್ ಗೆ ಅಳವಡಿಸಿದ್ದ ಕಬ್ಬಿಣದ ಗೇಟು ಕುಸಿದು ಬಿದ್ದು ಬಾಲಕಿ ಮೃತಪಟ್ಟಿರುವ ಘಟನ ಬೆಂಗಳೂರಲ್ಲಿ ನಡೆದಿದೆ. ಪಕ್ಕದ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಕಾಂಪೌಂಡ್ಗೆ ಅಳವಡಿಸಿದ್ದ ಕಬ್ಬಿಣದ ಗೇಟು ಮೈಮೇಲೆ ಬಿದ್ದು ನಾಲ್ಕು ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ತನ್ನ ಅಕ್ಕ ಸೇರಿಂದತೆ ಇತರೆ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಮಂಜುನಾಥ್ ತಮ್ಮ ಪತ್ನಿ ಶರ್ಮಿಳಾ ಹಾಗೂ ಮಕ್ಕಳಾದ ಕೃತಿ, ಧೃತಿ ಜೊತೆ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದರು. ಮಂಜುನಾಥ್ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಅದಕ್ಕೂ ಮುನ್ನ ಮಂಜುನಾಥ್ ಮಕ್ಕಳನ್ನು ತನ್ನ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು. ಸಂಜೆ ಮನೆಗೆ ಬಂದು ಪತ್ನಿಯೊಂದಿಗೆ ತಾಯಿ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಅಲ್ಲಿಂದ ಕರೆ ಬಂದಿತ್ತು. ಮಗುವಿನ ಮೇಲೆ ಗೇಟ್ ಬಿದ್ದಿದೆ ಮಗು ಮಾತನಾಡುತ್ತಿಲ್ಲ ಎಂದು, ತಕ್ಷಣವೇ ಅಲ್ಲಿಗೆ ತೆರಳಿದರೂ ಅಷ್ಟರಲ್ಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಕಳಪೆ ಕಾಮಗಾರಿ ಇಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.