ಮೈಸೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲೇ ಅಭ್ಯರ್ಥಿಗಳು ಭರ್ಜರಿ ಮತಯಾಚಿಸುತ್ತಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಸ್ಪರ್ಧಿಸುತ್ತಿದ್ದಾರೆ ಅವರ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಲಕ್ಷ್ಮಣ್ ಅವರು ಸ್ಪರ್ಧಿಸುತ್ತಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಕಾ ಒಡೆಯರ್ ಅವರೊಂದಿಗೆ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಮೋದಿ ರ್ಯಾಲಿಯ ನಂತರ ಮೈದಾನವನ್ನು ಸ್ವಚ್ಛಗೊಳಿಸಲು ಸಹಾಯ ಹಸ್ತ ಚಾಚಿದರು.
ಪಾಲಿಕೆ ಸಿಬ್ಬಂದಿಯೂ ಉಪಸ್ಥಿತರಿದ್ದು, ಕೆಲಸ ಮಾಡಿದ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಆದಷ್ಟು ಬೇಗ ಮೈದಾನವನ್ನು ಸ್ವಚ್ಚಗೊಳಿಸುವಂತೆ ಮನವಿ ಮಾಡಿದರು. ತ್ರಿಶಿಕಾ ಅವರೊಂದಿಗೆ ಯದುವೀರ್ ಕೂಡ ತ್ಯಾಜ್ಯವನ್ನು ಆರಿಸಿ ಸ್ವಚ್ಚಗೊಳಿಸಲು ಸಹಾಯ ಮಾಡಿದರು. ಕೆಲವು ಸ್ವಯಂಸೇವಕರು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಯದುವೀರ್ ಸ್ವಚ್ಛತಾ ಕಾರ್ಯಕ್ಕೆ ಮೈದಾನಕ್ಕೆ ಬಂದಿದ್ದನ್ನು ನೋಡಿ ಅನೇಕ ಮಾರ್ನಿಂಗ್ ವಾಕರ್ ಗಳು ಆಶ್ಚರ್ಯಚಕಿತರಾದರು ಮತ್ತು ತಕ್ಷಣವೇ ಮೈದಾನವನ್ನು ಸ್ವಚ್ಛಗೊಳಿಸುವುದನ್ನು ನೋಡಿ ಸಂತೋಷಪಟ್ಟರು.