ಬೆಂಗಳೂರು: ಮುಡಾ ಇಕ್ಕಳಿನಲ್ಲಿ ಸಿಲುಕುರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿರೋಧ ಪಕ್ಷದ ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡುವುದರ ಜೊತೆಗೆ ಇದೀಗ ವ್ಯಂಗ್ಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧ ಇನ್ನಷ್ಟು ಕಿಡಿ ಕಾರುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ರಂಗದಲ್ಲಿ ಯಾವುದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಇಲ್ಲಿಯವರೆಗೂ ರಾಜಕೀಯ ಮಾಡಿಕೊಂಡು ಬಂದಿರುವ ಅವರಿಗೆ ಇದೀಗ ಮುಡಾ ಸಂಕಷ್ಟ ಎದುರಾಗಿದ್ದು, ಈ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಕೂಡ ನಡೆಸುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಈಗಾಗಲೇ ಹಲವಾರು ರೀತಿಯಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆಯನ್ನು ಕೈಗೊಂಡಿದ್ದು ಇದೀಗ ವಿಭಿನ್ನ ರೀತಿಯಲ್ಲಿ ಬಿಜೆಪಿಯೂ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದೆ.
ಹೌದು, ಬಿಜೆಪಿ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್ ಹಾಕಿದೆ. “ಈ ದಸರಾದಲ್ಲಿ, ಐದು ಸಾವಿರ ಕೋಟಿ ಮೌಲ್ಯದ ಅದ್ಭುತವಾದ ಮುಡಾ “ಸೈಟ್” ಸೀಯಿಂಗ್ ಟೂರ್ಅನ್ನು ತಪ್ಪಿಸಿಕೊಳ್ಳಬೇಡಿ. ಸೈಟ್ ಸೀಯಿಂಗ್ನಲ್ಲಿ ನೀವು ಹಿಂದೆಂದು ನೋಡದ ಭ್ರಷ್ಟಾಚಾರವನ್ನು ಹತ್ತಿರದಿಂದ ನೋಡಬಹುದು. ಸೈಟ್ ಸೀಯಿಂಗ್ಗೆ ಗೋಲ್ಡ್ ಪಾಸ್ ಬೇಕೇ? ದಯವಿಟ್ಟು ಸಂಪರ್ಕಿಸಿ ಸಿಎಂ ಸಿದ್ದರಾಮಯ್ಯ (ನಿಯಮಗಳು ಮತ್ತು ಲಂಚ ಅನ್ವಯಿಸುತ್ತವೆ) ಮತ್ತು ನೆನಪಿಡಿ, ವಾಮ ಮಾರ್ಗವಾಗಿ ಪ್ರವೇಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತಮಾಷೆ ಅಲ್ಲ! ಕರ್ನಾಟಕದಲ್ಲಿ ನಾವು ಈಗಾಗಲೇ ಮುಖ್ಯಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ” ಎಂದು ಪೋಸ್ಟ್ ಹಾಕಿದೆ.
ಒಟ್ಟಿನಲ್ಲಿ ಅದೇನೇ ಆಗಲಿ 40 ವರ್ಷದ ರಾಜಕೀಯ ರಂಗದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಸಂಕಷ್ಟ ಎದುರಾಗಿದ್ದು ಈ ಸಂಕಷ್ಟದಲ್ಲಿ ಸಿದ್ದರಾಮಯ್ಯ ಅವರು ಪಾರಾಗುತ್ತಾರ ಅಥವಾ ಇದು ಸುಳ್ಳು ಆರೋಪ ಅಂತ ಸಾಬೀತುಪಡಿಸುತ್ತಾರೆ ಎಂದು ಕಾದು ನೋಡಬೇಕಿದೆ.