ನವದೆಹಲಿ, ಸೆ. 8 : ರಾಷ್ಟ್ರ ಕಾಲಿಡದ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕೈಗೊಂಡ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ತಮಿಳುನಾಡು ಮೂಲದ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯುಳ್ಳವರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತರಕ್ಕನ್ವಿಲೈ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರು.
ಇದೇ ಗ್ರಾಮದ ಶಾಲೆಯಲ್ಲಿ ಕಲಿಯುವಾಗ ಹಲವು ಸಮಸ್ಯೆಗಳನ್ನು ಖುದ್ದಾಗಿ ಅನುಭವಿಸಿದ ಶಿವನ್ ಅವರು ಸಮಸ್ಯೆಗಳನ್ನೇ ತಮ್ಮ ಗುರಿಯ ಉತ್ತುಂಗಕ್ಕೇರಲು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡರು. ಕುಟುಂಬದ ಮೊದಲ ಪದವಿ ಪೂರೈಸಿದ ಮೊದಲಿಗ ಎಂಬ ಖ್ಯಾತಿಗೆ ಪಾತ್ರರಾದ ಶಿವನ್, ವಿದ್ಯಾರ್ಥಿ ದಿಸೆಯಲ್ಲೇ ಹೆಚ್ಚು-ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡರು.
ಕುಟುಂಬದ ಬಡತನದಿಂದಾಗಿ ಶಿವನ್ ತಮಗಿಷ್ಟದ ಕೋರ್ಸ್ ಬದಲಾಗಿ 1974ರಲ್ಲಿ ನಾಗರಕೋಯಿಲ್ನಲ್ಲಿರುವ ಎಸ್ಟಿ ಹಿಂದೂ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪೂರೈಸಿದರು. ಅಲ್ಲದೆ, ಶಿವನ್ ಅವರು ಕಾಲಿಗೆ ಚಪ್ಪಲಿಯಿಲ್ಲದೆ ಬರಿಗಾಲಿನಲ್ಲಿ ಹಾಗೂ ಪ್ಯಾಂಟ್ ಇಲ್ಲದೆ ದೋತಿಯಲ್ಲೇ ಕಾಲೇಜಿಗೆ ಹೋಗುತ್ತಿದ್ದರಂತೆ. ಕೊನೆಗೆ 1980ರಲ್ಲಿ ಮದ್ರಾಸ್ ತಂತ್ರಜ್ಞಾನ ಸಂಸ್ಥೆಗೆ ಕಾಲಿಟ್ಟಾಗಲೇ ಮೊದಲ ಬಾರಿಗೆ ಪ್ಯಾಂಟ್ ಖರೀದಿಸಿದ್ದರು ಎಂದು ಹೇಳಲಾಗಿದೆ.