ಕೆ.ಆರ್.ಪುರ, ಡಿ. 05: ರಾಜ್ಯದಲ್ಲಿ ಇಂದು 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಸಮರ ನಡೆಯುತ್ತಿದ್ದು, ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಬಳಿ ಸಂತೋಷ್ ಎನ್ನುವ ಯುವಕನೊಬ್ಬ ಬ್ಯಾನರ್ ಹಿಡಿದು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಸಂತೋಷ್ ಎಂಬ ಯುವಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಭಾವ ಚಿತ್ರ ಹೊಂದಿದ ಬ್ಯಾನರ್ ಹಿಡಿದು ಅರ್ಹರಿಗೆ ಮತ ಚಲಾಯಿಸಿ ಪ್ರಜಾಪ್ರಭುತ್ವ, ಕರ್ನಾಟಕ ಹಾಗೂ ಭಾರತ ಉಳಿಸಿ ಎಂದು ಮನವಿ ಮಾಡಿದರು.
ಹಣಕ್ಕಾಗಿ ಏನನ್ನಾದರೂ ಮಾಡುತ್ತೇವೆ ಎನ್ನುವವರನ್ನು ತಿರಸ್ಕರಿಸಿ ಭಾರತ ಉಳಿಸಿ ಎಂಬುದಷ್ಟೇ ನನ್ನ ಮನವಿ ಎಂದು ಅನರ್ಹರ ವಿರುದ್ಧ ಸಂತೋಷ್ ಪರೋಕ್ಷವಾಗಿ ಸಮರ ಸಾರುತ್ತಿದ್ದಾರೆ.