ಬೆಂಗಳೂರು, ಮಾ, 26, ಲೋಕಸಭಾ ಚುನಾವಣಾ ನಿಮಿತ್ತ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮೋದಿ ಮೋದಿ ಎಂದು ಜೈಕಾರ ಹಾಕಿದವರ ಮೇಲೆ ಹಲ್ಲೆ ಮಾಡಿ ಎಂದು ಕರೆ ನೀಡಿರುವ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಕಾನೂನು ಕ್ರಮ ಜರುಗಿದಲು ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ಆಗ್ರಹಿಸಿದರು.
ಪ್ರಜಾ ಪ್ರತಿನಿಧಿ ಕಾಯ್ದೆಯ ಮಹತ್ವವನ್ನು ತಿಳಿದು ಗೌರವಯುತವಾಗಿ ನಡೆದುಕೊಳ್ಳಬೇಕಾದ ಜವಾಬ್ದಾರಿ ಇರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ತನ್ನ ಇತಿಮಿತಿಯನ್ನು ಮೀರಿ ಮಾತನಾಡಿದ್ದಾರೆ, ಚುನಾವಣಾಧಿಕಾರಿಗಳಿಗೆ ಶಾಸಕರ ವಿರುದ್ಧ ದೂರು ನೀಡಿದ ಎನ್.ಡಿ.ಪ್ರಸಾದ್ ಮಾತನಾಡಿ, ಮೋದಿಗೆ ಜೈಕಾರ ಹಾಕಿದವರ ಮೇಲೆ ಹಲ್ಲೆ ಮಾಡಿ ಎನ್ನುವ ಪ್ರಚೋದನಾಕಾರಿ ಕರೆ ನೀಡಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ತೋರಿರುವ ಅಪಮಾನ ಎಂದರು. ನೀತಿ ಸಂಹಿತೆ, ಪ್ರಜಾಪ್ರತಿನಿಧಿಕಾಯ್ದೆ ಉಲ್ಲಂಘಿಸಿರುವ ಶಾಸಕರ ವಿರುಧ ಚುನಾವಣಾಧಿಕಾರಿಗಳು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ತಪ್ಪಿದರೆ, ಜಿಲ್ಲೆಯ ಕಾರ್ಯಕರ್ತರು ರಸ್ತೆಗಿಳಿದು ಹೋರಾಡುವುದಾಗಿ ಎಚ್ಚರಿಕೆ ನೀಡಿದರು. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಡುತ್ತಿರುವ ನಟರಾದ ದರ್ಶನ್ ಮತ್ತು ಯಶ್ ಅಭಿಮಾನಿಗಳನ್ನೂ ಜೆಡಿಎಸ್ ಗೂಂಡಾ ಶಾಸಕರು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್ ಗೂಂಡಾ ವರ್ತನೆ ಬಗ್ಗೆ ಮತದಾರ ಬಂಧುಗಳು ಜಾಗೃತರಾಗಿರಬೇಕು ಎಂದು ಹೇಳಿದರು.