ಹಾಸನ: ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಇಷ್ಟು ಬೇಗ ಸಾಯಲ್ಲ. ಆ ಭಗವಂತ ನನ್ನನ್ನು ಕಾಪಾಡುತ್ತಾನೆ ಎಂದು ಭಾವುಕವಾಗಿ ಮಾತನಾಡಿದರು. ದೇವೇಗೌಡರ ಹೆಸರು ಉಳಿಸಲು ಬಿಜೆಪಿ ಜೊತೆ ಮೈತ್ರಿ ತೀರ್ಮಾನ ಮಾಡಿದ್ದೇನೆ ಹೆಸರು ಹಾಳು ಮಾಡಲು ಅಲ್ಲ.
ನೀವು ನಮ್ಮನ್ನ ಸೋಲಿಸಿಲ್ಲ, ನಾವೇ ಮೈ ಮರೆತಿದ್ದೇವೆ. ಪಕ್ಷ ಕಟ್ಟಬೇಕು ಎಂದು ನಿರಂತರ 90 ದಿನ ಶ್ರಮ ಹಾಕಿದೆ. ಎಲ್ಲಾ ಕಡೆ ಜನ ಸಾಗರ ಸೇರಿತು. ಆದರೆ ಯಾರ ಕೆಟ್ಡ ದೃಷ್ಟಿ ಬಿತ್ತೊ ಗೊತ್ತಿಲ್ಲ 19ಕ್ಕೆ ಇಳಿದಿದ್ದೇವೆ ಎಂದು ಸೋಲಿನ ಬೇಸರ ಹೊರ ಹಾಕಿದರು.
ನನಗೆ ಚಿಕ್ಕ ವಯಸ್ಸಿನಿಂದಲೇ ಅರೋಗ್ಯ ಸಮಸ್ಯೆ ಇದೆ. ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಈಗ ಮತ್ತೆ ಆಪರೇಷನ್ ಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನನಗೆ ನನ್ನ ಅರೋಗ್ಯಕ್ಕಿಂತ ಜನರ ಹಿತ ಮುಖ್ಯ. ಇನ್ನೆರಡು ದಿನದಲ್ಲಿ ನಾನು ಮತ್ತೆ ಅಸ್ಪತ್ರೆಗೆ ಸೇರಬೇಕು.
ಈ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಯಿಂದ ಯಾವುದೇ ವ್ಯತ್ಯಾಸ ಆಗಬಾರದು. ಪ್ರಜ್ವಲ್ ಈ ಕ್ಷೇತ್ರದ ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಎಂದು ಭಾವಿಸಿ ತೀರ್ಮಾನ ಮಾಡಿ. ಯಾವುದೇ ಅಪಪ್ರಚಾರಕ್ಕೆ ಬಲಿ ಆಗಬೇಡಿ ಎಂದು ಮನವಿ ಮಾಡಿಕೊಂಡರು.
ಮೈತ್ರಿಯ ಕ್ಷೇತ್ರ ಹಂಚಿಕೆ ಸಂಬಂಧ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಮಂಡ್ಯ, ಕೋಲಾರ, ಹಾಸನ ಕೊಡಲು ತೀರ್ಮಾನ ಮಾಡಿದ್ದಾರೆ. ಇನ್ನು ಕೊಡೋರು ಆದರೆ ಚುನಾವಣೆ ಮಾಡೋ ಶಕ್ತಿ ನಮಗಿಲ್ಲ. ನಾನು ಅಷ್ಟ ಬೇಗ ಸಾಯಲ್ಲ ನಿಮ್ಮ ಜೊತೆ ಇರ್ತೇನೆ . ಭಗವಂತ ನನಗೆ ಅಯಸ್ಸು ಕೊಡ್ತಾನೆ ಎಂದು ಭಾವುಕರಾಗಿ ಕುಮಾರಸ್ವಾಮಿ ಮಾತನಾಡಿದರು.
ಮಾರ್ಚ್ 21ರಂದು ಶಸ್ತ್ರಚಿಕಿತ್ಸೆ
ಮಾರ್ಚ್ 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಅಮೆರಿಕದಿಂದ ವೈದ್ಯರು ಬರ್ತಾರೆ. ಆಪರೇಷನ್ ಆದ ಬಳಿಕ ನಾನು ಮೂರೇ ದಿನ ರೆಸ್ಟ್ ಮಾಡೋದು. ನಂತರ ನಮ್ಮ ಹಾಗೂ ಬಿಜೆಪಿಯ ಅಭ್ಯರ್ಥಿ ಗಳ ಪರ ಕೆಲಸ ಮಾಡುತ್ತೇನೆ ಎಂಬ ವಿಷಯವನ್ನು ತಿಳಿಸಿದರು.