ಬೆಂಗಳೂರು: ಹಾಸ್ಟೆಲ್
ಹೊರಗುತ್ತಿಗೆ ನೌಕರರು ತಮ್ಮನ್ನು ಸೇವೆಯಲ್ಲಿ ಮುಂದುವರೆಸಿ ನಿವೃತ್ತಿವರೆಗೂ ಸೇವಾ ಭದ್ರತೆ ನೀಡಬೇಕು
ಎಂದು ಆಗ್ರಹಿಸಿ ಇಂದಿನಿಂದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟ ಸಾಮೂಹಿಕ ಧರಣಿ ಆರಂಭಿಸಿದ್ದಾರೆ.
ಸೇವೆಯಲ್ಲಿ
ಮುಂದುವರೆಸಲು ಮತ್ತು ನಿವೃತ್ತಿಯವರೆಗೂ ಸೇವಾ ಭದ್ರತೆ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ
ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘಟನೆ ನೇತೃತ್ವದಲ್ಲಿ ರಾಜ್ಯದ
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ನೌಕರರು ಧರಣಿಯಲ್ಲಿ ಭಾಗವಹಿಸಿದ್ದಾರೆ.
ಪ್ರತಿಭಟನಾ
ಧರಣಿ ಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಕೆಲಸದಿಂದ
ತೆಗೆದು ಹಾಕುವ ಆದೇಶವನ್ನು ಹಿಂಪಡೆದು ಹೊರಗುತ್ತಿಗೆ ನೌಕರರನ್ನು ಕೆಲಸದಲ್ಲಿ ಮುಂದುವರೆಸಬೇಕು.
ಬಾಕಿ ವೇತನ ಪಾವತಿಸಬೇಕು ಹಾಗೂ ಹೊರಗುತ್ತಿಗೆ ನೌಕರರನ್ನು ನಿವೃತ್ತಿಯವರೆಗೂ ಮುಂದುವರೆಸಬೇಕು ಎಂದು
ಆಗ್ರಹಿಸಿದರು.
ಮರಳಿ
ಕೆಲಸಕ್ಕೆ ಸೇರಿದ ಹೊರಗುತ್ತಿಗೆ ನೌಕರರ ಬಾಕಿ ವೇತನ ಕೂಡಲೇ ನೀಡಬೇಕು ಹಾಗೂ ಬಾಕಿ ಅರಿಹರ್ಸ್
ಹಣವನ್ನು ಪಾವತಿಸಬೇಕು. ಎಲ್ಲಾ ಹೊರಗುತ್ತಿಗೆ ನೌಕರರಿಗೂ ಪಿ.ಎಫ್., ಇ.ಎಸ್,ಐ ಸೌಲಭ್ಯವನ್ನು
ವಿಸ್ತರಿಸಬೇಕು. ಹೊರಗುತ್ತಿಗೆ ನೌಕರರಿಗೆ ವಾರಕ್ಕೊಂದು ರಜೆ ಕೊಡುವುದನ್ನು ಜಾರಿಗೊಳಿಸಬೇಕು
ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬಾಕಿ ಇರುವ 2018ರ ಜುಲೈ ತಿಂಗಳ ವೇತನ ನೀಡಬೇಕು. ನೌಕರರ ವೇತನದಲ್ಲಿ ಕಡಿತಗೊಳಿಸಿ ಪಿ.ಎಫ್.ಇ.ಎಸ್.ಐ ಹಣವನ್ನು ಖಾತೆಗಳಿಗೆ ಜಮಾ ಮಾಡದೇ ಮೋಸ ಮಾಡಿದ ಹಣವನ್ನು ವಾಪಸ್ ನೀಡಬೇಕು ಎಂದು ನಿತ್ಯಾನಂದ ಸ್ವಾಮಿ ಹೇಳಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಸಂಘಟನೆಯ, ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ಸಹ ಕಾರ್ಯದರ್ಶಿ ಕೆ.ಹನುಮೇಗೌಡ, ಖಜಾಂಚಿ, ಚಂದ್ರಪ್ಪ ಹೊಸ್ಕೇರಾ, ಮುಖಂಡರಾದ ಪೀರು ರಾಠೋಡ್ ಸೇರದಂತೆ ಸಾವಿರಾರು ಕಾರ್ಮಿಕರು ಇದ್ದರು.



