ಹುಳಿಯಾರು: ಲಾಕ್ಡೌನ್ ಸಂದರ್ಭದಲ್ಲೂ ಹಾಲು ಉತ್ಪಾದಕರಿಂದ ಹಾಲು ಖರೀದಿ ನಿಲ್ಲಿಸದೆ, ಹದಿನೈದು ದಿನಕ್ಕೊಮ್ಮೆ ನೀಡುವ ಬಡವಾಡೆಯನ್ನೂ ನಿಲ್ಲಿಸದೆ ಹೈನುಗಾರರ ನೆರವಾಗಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ ತಿಳಿಸಿದರು.
ಹುಳಿಯಾರು ಹೋಬಳಿ ಕುರಿಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ ನೇ ಸಾಲಿನ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜಮೀನು, ತೋಟ ಉಳ್ಳವರಿಗಿಂತ ಮರ್ನಲ್ಕು ಹಸು ಕಟ್ಟಿ ಹೈನುಗಾರಿಕೆ ಮಾಡಿದವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಾಗಾಗಿಯೇ ಕೊರೊನಾಕ್ಕೆ ಹೆದರಿ ಪಟ್ಟಣ ಬಿಟ್ಟು ಹಳ್ಳಿಗೆ ಬಂದ ಯುವಕರು ಉಪಕಸುಬಾಗಿ ಹೈನುಗಾರಿಗೆ ಆಯ್ಕೆ ಮಾಡಿಕೊಂಡರು. ಪರಿಣಾಮ ನಿತ್ಯ ಒಕ್ಕೂಟಕ್ಕೆ ತಾಲೂಕಿನಿಂದ ೮೦ ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಸರಬರಾಜು ಆಗುತ್ತಿದೆ ಎಂದರು.
೨೦೧೯-೨೦ ನೇ ಸಾಲಿನಲ್ಲಿ ಕುರಿಹಟ್ಟಿ ಡೇರಿಯು ಹಾಲು ಉತ್ಪಾದಕರಿಂದ ೪೬ ಲಕ್ಷ ರೂ.ಗಳ ಹಾಲು ಖರೀದಿಸಿ ಒಕ್ಕೂಟಕ್ಕೆ ೫೦.೭೮ ಲಕ್ಷ ರೂ.ಗಳಿಗೆ ಮಾರಾಟ ಮಾಡಿ ೪ ಲಕ್ಷ ರೂ. ಲಾಭ ಗಳಿಸಿದೆ. ಇದರಲ್ಲಿ ಖರ್ಚುವೆಚ್ಚ ಕಳೆದು ೧.೬೧ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದ ಅವರು ಗುಣಮಟ್ಟದ ಹಾಲು ಹಾಕುವ ಮೂಲಕ ಉತ್ಪಾದಕರೂ ಹೆಚ್ಚು ಲಾಭ ಪಡೆದು ಡೇರಿಯಲ್ಲೂ ಲಾಭದಾಯಕವಾಗಿ ಮಾಡಿ ಎಂದು ಕಿವಿ ಮಾತು ಹೇಳಿದರು.