ಬಂಗಾರಪೇಟೆ: ಪಟ್ಟಣದಲ್ಲಿ ಪುರಸಭೆಗೆ ಸೇರಿರುವ ಕನ್ವರ್ಷನ್ ಜಾಗವು ಸುಮಾರು ವರ್ಷಗಳಿಂದ ಕೆಲ ವ್ಯಕ್ತಿಗಳು ಪುರಸಭೆಯ ಅನುಮತಿ ಇಲ್ಲದೆ ಗೇಟ್ಗಳನ್ನು ಬಂದೋಬಸ್ತ್ ಮಾಡಿಕೊಂಡು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಈ ಕನ್ಸರ್ವೆನ್ಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆತ್ಮ ವಿಶ್ವಾಸ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೀಸಂದ್ರ ಎಂ.ಎನ್. ಭಾರದ್ವಾಜ್ ಒತ್ತಾಯಿಸಿದ್ದಾರೆ.
ಈ ಜಾಗವು ಪುರಸಭೆಗೆ ಸೇರಿದ್ದರೂ ಸಹ ಕೆಲವರು ಕಾನೂನನ್ನು ಉಲ್ಲಂಘನೆ ಮಾಡಿ ಕೈಗೆತ್ತಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ. ಬಜಾರ್ ಮುಖ್ಯ ರಸ್ತೆಗಳಲ್ಲಿ, ವಿಜಯ ನಗರ ಹಾಗೂ ಇನ್ನೂ ಮುಂತಾದ ಕಡೆಗಳಲ್ಲಿ ರಾಜಾರೋಷವಾಗಿ ಗೇಟ್ಗಳನ್ನು ನಿರ್ಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯನ್ನುಂಟುಮಾಡಿದ್ದಾರೆ, ಈ ಕುರಿತು ಪುರಸಭೆಯವರಿಗೆ ಎಷ್ಟೋ ಭಾರಿ ದೂರುಗಳು ನೀಡಿದ್ದರೂ ಸಹ ಮೌನವಾಗಿದ್ದಾರೆ. ಆಕ್ರಮಿಸಿಕೊಂಡಿರುವ ಜಾಗವನ್ನು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.