ಹುಳಿಯಾರು:ಜಮೀನು ಒತ್ತುವರಿ ಸಮಸ್ಯೆಯನ್ನು ಕಾನೂನಿನ ರೀತಿ ಬಗೆಹರಿಸಿಕೊಳ್ಳದೆ ನೂರಾರು ಅರಣ್ಯ ಮರಳನ್ನು ಬಲಿ ತೆಗೆದುಕೊಂಡಿರುವ ಘಟನೆ ಹುಳಿಯಾರು ಸಮೀಪದ ದೊಡ್ಡಬೆಳವಾಡಿ ಗ್ರಾಮದಲ್ಲಿ ಜರುಗಿದೆ.
ದೊಡ್ಡಬೆಳವಾಡಿ ನಿವಾಸಿ ರಮೇಶ್ ಎಂಬುವವರು ತಮ್ಮ ಬೆಳವಾಡಿ ಸರ್ವೆ ನಂ ೪೨/೬ ರ ೩.೨೮ ಎಕರೆ ಜಮೀನಿನಲ್ಲಿ ತೋಟಗಾರಿಗೆ ಬೆಳೆಗಳನಿಟ್ಟು ಕೃಷಿ ಮಾಡಿದ್ದಾರೆ. ಇದೇ ಜಮೀನಿನ ಉತ್ತರ ದಿಕ್ಕಿನಲ್ಲಿ ಆರಣ್ಯ ಇಲಾಖೆಯಿಂದ ವಿತರಿಸಿದ್ದ ಹೆಬ್ಬೇವು, ಸಿಲ್ವರ್ ಇತ್ಯಾದಿ ಗಿಡಗಳನ್ನು ನೆಟ್ಟಿದ್ದಾರೆ. ಇದಕ್ಕೆ ಪಕ್ಕದ ಜಮೀನಿನ ನಾಗರಾಜು ಎಂಬುವವರು ತಕರಾರು ತೆಗೆದಿದ್ದು ನಮ್ಮ ಜಮೀನಿನ ಒಳಗೆ ನೆಟ್ಟಿದ್ದೀರಿ ತಕ್ಷಣ ಕಿತ್ತು ಹಾಕಿ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ರಮೇಶ್ ಅವರು ಈಗಾಗಲೇ ೨೦ ರಿಂದ ೩೦ ಅಡಿ ಬೆಳೆದಿದ್ದು ಈಗ ಏಕಾಏಕಿ ಕಡಿಯುವ ಬದಲು ಸರ್ವೆ ಮಾಡಿಸೋಣ. ಸರ್ವೆಯಲ್ಲಿ ನಿಮ್ಮ ಜಮೀನಿಲ್ಲಿದ್ದರೆ ನಿಮಗೆ ಬಿಟ್ಟು ಕೊಡುತ್ತೇವೆ. ಇಲ್ಲವಾದಲ್ಲಿ ನಾವು ಇಟ್ಟುಕೊಳ್ಳುತ್ತೇವೆ. ಸುಮ್ಮನೆ ಕಡಿದು ಹಾಳು ಮಾಡುವ ಬದಲು ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಇದಕ್ಕೆ ಒಪ್ಪದ ನಾಗರಾಜು ಅವರು ಏಕಾಏಕಿ ಸುಮಾರು ೭೫ ಮರಗಳನ್ನು ಬುಡದವರೆವಿಗೂ ಕೊಯ್ದು ನೆಲಕ್ಕುರುಳಿಸಿದ್ದಾರೆ. ೧.೫೦ ಲಕ್ಷ ರೂ. ಬೆಲೆ ಬಾಳುವ ೨೫ ಹೆಬ್ಬೇವು, ೪೫ ಸಾವಿರ ಬೆಲೆ ಬಾಳುವ ಸಿಲ್ವರ್, ೨ ಸಾವಿರ ಬೆಲೆ ಬಾಳುವ ೪ ಬೇವಿನ ಮರಗಳು ಸೇರಿ ೨ ಲಕ್ಷ ರೂ. ನಷ್ಟವಾಗಿದೆ. ಈ ಸಂಬಂಧ ರಮೇಶ್ ಅವರು ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.