ಗೊಂದಲಗಳ ನಡುವೆಯೇ ನೂತನ ನಿಲ್ದಾಣಕ್ಕೆ ಸ್ಥಳಾಂತರ

ಗೊಂದಲಗಳ ನಡುವೆಯೇ ನೂತನ ನಿಲ್ದಾಣಕ್ಕೆ ಸ್ಥಳಾಂತರ

ಹುಬ್ಬಳ್ಳಿ, ಜ. 31: ಅಂತೂ ಇಂತೂ ಹಲವಾರು ಗೊಂದಲ, ಸಮಸ್ಯೆ, ಒತ್ತಡ, ಪ್ತಭಾವಿಗಳ ಪ್ರಭಾವ, ಕೇಲ ಉದ್ಯಮಿಗಳ ಲಾಭಿ ಮತ್ತು ಮೂಲಸೌಕರ್ಯ ಕೊರತೆ ನಡುವೆಯೇ ಕಳೆದ  ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹಳೇ ಬಸ್‌ ನಿಲ್ದಾಣದಿಂದ ಹೊಸೂರು ಪ್ರಾದೇಶಿಕ ಟರ್ಮಿನಲ್‌ ನಿಲ್ದಾಣ ಸ್ಥಳಾಂತರಕ್ಕೆ ಮಹೂರ್ತ ಮೂಡಿಬಂದಿದೆ.

ಆಡಳಿತಾತ್ಮಕವಾಗಿ ಮತ್ತು ಪ್ರಯಾಣಿಕರಿಗೆ ಅನುಕೂಲ ವಾಗುವ ರೀತಿಯಲ್ಲಿ ಹಂತ-ಹಂತವಾಗಿ ಬಸ್‌ ಸ್ಥಳಾಂತರಕ್ಕೆ ನಿರ್ಧರಿಸಿದ್ದು, ಹೊಸೂರು ಪ್ರಾದೇಶಿಕ ಟರ್ಮಿನಲ್‌ ಸಿದ್ಧವಾಗಿದ್ದು, ಇನ್ನು ಹಲವಾರು ಸೌಕರ್ಯಗಳನ್ನು ಒದಗಿಸಬೇಕಾಗಿದೆ.  ಹೊಸೂರು ಬಸ್‌ ನಿಲ್ದಾಣದಿಂದ ಸಂಚರಿಸುವ ಬಸ್‌ಗಳಿಗೆ ಪೂರಕವಾದ ರಸ್ತೆಯಿಲ್ಲದ ಪರಿಣಾಮ ಸ್ಥಳಾಂತರ ಎನ್ನುವುದು ಗೊಂದಲದ ಗೂಡಾಗಿ ಪರಿಣಿಮಿಸಿತ್ತು.

ಇದೀಗ ಟರ್ಮಿನಲ್‌ಗೆ ಫೆ.2ರಂದು ಉದ್ಘಾಟನೆ ಭಾಗ್ಯ ಕೂಡಿ ಬಂದಿರುವ ಹಿನ್ನೆಲೆಯಲ್ಲಿ ಅನುಸೂಚಿಗಳ ಸ್ಥಳಾಂತರಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂದಾಗಿದ್ದಾರೆ. ಎಲ್ಲಾ ಬಸ್‌ಗಳನ್ನು ಏಕಕಾಲಕ್ಕೆ ಸ್ಥಳಾಂತರ ಮಾಡುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಹಾಗೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯ ಒದಗಿಸುವುದು ಕಷ್ಟ ಜೊತೆಗೆ ಆಡಳಿತದ ಸಣ್ಣ ದೃಷ್ಟಿಯಿಂದ ತೊಂದರೆ ಯಾಗುತ್ತದೆ ಎನ್ನುವ ಕಾರಣಕ್ಕೆ ಹಂತ-ಹಂತವಾಗಿ ಸ್ಥಳಾಂತರಿಸಲು ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ಒಂದಿಷ್ಟು ಮಾರ್ಗದ ಬಸ್‌ಗಳು ಮಾತ್ರ ಫೆಬ್ರವರಿ ಮೊದಲ ವಾರದಲ್ಲಿ ಟರ್ಮಿನಲ್‌ಗೆ ಸ್ಥಳಾಂತ ರಗೊಳ್ಳಲಿವೆ.

ಹೊಸೂರು ಟರ್ಮಿನಲ್‌ಲ್ಲಿ ಸದ್ಯ 23 ಪ್ಲಾಟ್‌ಫಾರ್ಮ್ ಹಾಗೂ ಪ್ರಯಾಣಿಕರಿಗೆ ಮೂಲ ಸೌಲಭ್ಯದ ದೃಷ್ಟಿಯಿಂದ ಮೊದಲ ಹಂತದಲ್ಲಿ 300 ರಿಂದ 320 ಅನುಸೂಚಿಗಳು ಸ್ಥಳಾಂತರಗೊಳ್ಳಲಿವೆ. ಗದಗ ಮಾರ್ಗವಾಗಿ ಸಂಚರಿಸುವ ಕೊಪ್ಪಳ, ಕಲಬುರಗಿ, ಹೈದ್ರಾಬಾದ್‌. ವಿಜಯಪುರ ಮಾರ್ಗದ ಬಾಗಲಕೋಟೆ, ಜಮಖಂಡಿ ಮಾರ್ಗದ ಅಥಣಿ, ತೇರದಾಳ, ಮುಧೋಳ ಮಾರ್ಗದ ಬಸ್‌ಗಳು ಟರ್ಮಿನಲ್‌ನಿಂದ ಸಂಚರಿಸಲಿವೆ.

ಇನ್ನೂ ಶಿರಸಿ ಹಾಗೂ ಯಲ್ಲಾಪೂರ ಬಸ್‌ಗಳು ಕೂಡ ಮೊದಲಿನಂತೆ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ. ಎರಡನೇ ಹಂತದಲ್ಲಿ ಒಂದಿಷ್ಟು  ಮಾರ್ಗದ ಬಸ್‌ಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಹಾನಗಲ್ಲ ಮಾರ್ಗವಾಗಿ ಸಂಚರಿಸುವ ಶಿಕಾರಿಪುರ, ಶಿವಮೊಗ್ಗ, ಆನವಟ್ಟಿ. ಶಿವಮೊಗ್ಗ ಮಾರ್ಗವಾಗಿ ಮೈಸೂರು ಹಾಗೂ ಇತರೆ. ಪ್ರಮುಖವಾಗಿ ಬೆಂಗಳೂರು ಹಾಗೂ ಸವಣೂರು, ಹಾವೇರಿ, ಹರಿಹರ, ಚಿತ್ರದುರ್ಗ ಹಾಗೂ ತುಮಕೂರು ಬಸ್‌ಗಳು ಸದ್ಯಕ್ಕೆ ಹಳೇ ಬಸ್‌ ನಿಲ್ದಾಣದಲ್ಲೇ ಉಳಿಯಲಿವೆ. ಬೆಂಗಳೂರು ಮಾರ್ಗದ ಬಸ್‌ಗಳು ಇಲ್ಲಿನ ಹಾಗೂ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ.

ಗದಗ ನಾನ್‌ಸ್ಟಾಪ್‌ ಹಾಗೂ ನವಲಗುಂದ ಸಾಮಾನ್ಯ ಬಸ್‌ಗಳು, ಕುಂದಗೋಳ, ಕುಂದಗೋಳ ಲಕ್ಷ್ಮೇಶ್ವರ ಮಾರ್ಗ ಸೇರಿದಂತೆ ಗ್ರಾಮೀಣ, ಉಪನಗರ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 1300 ಅನುಸೂಚಿಗಳ ಪೈಕಿ 320 ಹೊಸೂರು ಟರ್ಮಿನಲ್‌, 380 ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಹಳೇ ಬಸ್‌ ನಿಲ್ದಾಣದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ ನಡೆಯುವುದರಿಂದ ಸ್ಥಳಾಂತರ ಅನಿವಾ ರ್ಯವಾಗಿದೆ. ಹೊಸೂರಿನ ಹಳೇ ಡಿಪೋ ಹಿಂಭಾಗದಲ್ಲಿ ನಿರ್ಮಿಸಿರುವ ರಸ್ತೆ ಹಾಗೂ ಶಕಂತುಲಾ ಆಸ್ಪತ್ರೆ ಮುಂಭಾಗದ ರಸ್ತೆಗಳನ್ನು ಏಕಮುಖ ರಸ್ತೆಯನ್ನಾಗಿಸಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ಆದರೆ ತಿಮ್ಮಸಾಗರ ರಸ್ತೆ ನೂತನ ಕೋರ್ಟ್‌ ಸೇರಿದಂತೆ ವಿವಿಧ ಆಸ್ಪತ್ರೆಗಳು ಇರುವುದರಿಂದ ಏಕಮುಖ ರಸ್ತೆ ಕಷ್ಟಸಾಧ್ಯವಾಗಿದೆ.

ಮೂಲ ಸೌಲಭ್ಯ ಕೊರತೆ

ಇದೀಗ ಸುಮಾರು 320 ವೇಗದೂತ ಬಸ್‌ ಗಳನ್ನು ಸ್ಥಳಾಂತರಿಸಲು ಹಿರಿಯ ಅಧಿಕಾರಿಗಳ ಸಮಿತಿ ನಿರ್ಧಾರವಾಗಿದೆ. ಇಷ್ಟೊಂದು ಪ್ರಯಾಣಿಕರಿಗೆ ಅಗತ್ಯವಾದ ಮೂಲ ಸೌಲಭ್ಯ ನೀಡುವುದು ಕಷ್ಟ ಸಾಧ್ಯವಾಗಿದೆ. ಸದ್ಯದ ಮಟ್ಟಿಗೆ ಕುಡಿಯುವ ನೀರು, ಶೌಚಾಲಯ ಸಮಸ್ಯೆಯಿಲ್ಲ. ಆದರೆ ಇದನ್ನು ಹೊರತುಪಡಿಸಿ ಪ್ರಮುಖವಾಗಿ ಹೊಟೇಲ್‌ಗ‌ಳ ಅಗತ್ಯವಿದೆ. ಎಲ್ಲಾ ಸೌಲಭ್ಯ ಒದಗಿಸಿ ಮೇಲೆಯೇ ಸ್ಥಳಾಂತರ ಉತ್ತಮ ಎನ್ನುವ ಅಭಿಪ್ರಾಯವಿದೆ.

ಹೊಸೂರು ಟರ್ಮಿನಲ್‌ ಉದ್ಘಾಟನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ನಿಲ್ದಾಣ ಬಳಕೆಯಾಗದಿದ್ದರೆ ಜನರು ವಿರೋಧ ಎದುರಿಸ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ ಒಂದಿಷ್ಟು ಬಸ್‌ಗಳನ್ನಾದರೂ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬಿಆರ್‌ ಟಿಎಸ್‌ ಸಂಸ್ಥೆ ಕಟ್ಟಡಗಳನ್ನು ವಾಯವ್ಯ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಸಕಾಲದಲ್ಲಿ ವರ್ಗಾವಣೆ ಮಾಡಿದ್ದರೆ ಹೊಟೇಲ್‌, ಸ್ವತ್ಛತೆ, ವಾಹನ ಪಾರ್ಕಿಂಗ್‌ ಟೆಂಡರ್‌ ಪ್ರಕ್ರಿಯೆ ಮುಗಿಸಿ ಉದ್ಘಾಟನೆ ವೇಳೆಗೆ ಸಜ್ಜುಗೊಳ್ಳುತ್ತಿತ್ತು. ಮುಂದಾಲೋಚನೆ ಕೊರತೆ ಸಮಸ್ಯೆಯಾಗಿ ಪರಿಣಿಮಿಸಿದೆ.

ಕಲ್ಮೇಶ ಮಂಡ್ಯಾಳ

 

ಫ್ರೆಶ್ ನ್ಯೂಸ್

Latest Posts

Featured Videos