ಬೆಂಗಳೂರು, ಜ. 24: ಇಡಿ ರಾಜ್ಯವನ್ನೆ ಬೆಚ್ಚಿ ಬಿಳಿಸಿದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಉಡುಪಿ ಮೂಲದ ಆದಿತ್ಯ ರಾವ್ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಮತ್ತೊಂದೆಡೆ ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ಹೆಸರಿನಲ್ಲಿ ಸಿನಿಮಾ ನಿರ್ಮಿಸಲು ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರು ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕ ತುಳಸಿ ರಾಮ್ “ 1st ರ್ಯಾಂಕ್ ಟೆರರಿಸ್ಟ್ ಆದಿತ್ಯ” ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿರುವುದಾಗಿ ವರದಿಯಾಗಿದೆ.
ಆದಿತ್ಯ ರಾವ್ ಹೆಸರಿನಲ್ಲಿ ಚಿತ್ರ ನಿರ್ಮಾಣವಾಗಲಿದೆಯಾ? ಇದಕ್ಕೆ ನಿರ್ಮಾಪಕರು ಯಾರು? ಹೀರೋ ಯಾರು? ಕಥೆ, ಚಿತ್ರಕಥೆ ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಶೀರ್ಷಿಕೆ ರಿಜಿಸ್ಟರ್ ಆದ ಕೂಡಲೇ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳುವುದು ಕಷ್ಟ. ಯಾಕೆಂದರೆ ಕಳೆದ ಉಪ ಚುನಾವಣೆಯ ಪ್ರಚಾರದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ನಿಖಿಲ್ ಎಲ್ಲಿದ್ದಿಯಪ್ಪ ಶೀರ್ಷಿಕೆಯನ್ನು ನೋಂದಾಯಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.
ಮತ್ತೊಂದೆಡೆ ಮತ್ತೊಂದು ವರದಿ ಪ್ರಕಾರ, ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸ್ಫೋಟಕ ಪ್ರಕರಣದ ಬಗ್ಗೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಸಿನಿಮಾ ಕಥೆ ಬರೆಯಲು ಮುಂದಾಗಿದ್ದಾರೆ ಎಂದು ತಿಳಿಸಿದೆ.