ಮೈಸೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ಭ್ರಷ್ಟಾಚಾರಿ ಎಂದು ಪ್ರಧಾನಿ ಮೋದಿ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಾಜೀವ್ ಗಾಂಧಿ ಎಂದೂ ಭ್ರಷ್ಟಾಚಾರ ಮಾಡಿದವರಲ್ಲ. ನಾನು ಹಣ ಮಾಡಲು ಅಧಿಕಾರಕ್ಕೆ ಬಂದಿಲ್ಲ, ಜನರು ನಮ್ಮ ಕುಟುಂಬದ ಬಗ್ಗೆ ಇಟ್ಟ ಗೌರವಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು. ಭ್ರಷ್ಟಾಚಾರದ ಆರೋಪ ಬಂದಾಗ ರಾಜಕೀಯ ಬಿಡುತ್ತೇನೆ ಎಂದಿದ್ದರು. ದೆಹಲಿ ಹೈಕೋರ್ಟ್ ಸಹ ಆರೋಪ ಮುಕ್ತ ಮಾಡಿದೆ. ರಾಜೀವ್ ಬಗ್ಗೆ ಮೋದಿಗೆ ಹೀಗೆ ಆರೋಪ ಮಾಡಬಾರದಿತ್ತು ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ಮಾಜಿ ಪ್ರಧಾನಿ ವಾಜಪೇಯಿ ಅವರು ರಾಜೀವ್ ಬಗ್ಗೆ ಒಳ್ಳೆಯ ಮಾತನಾಡಿದ್ದರು. ರಾಜೀವ್ ದೇಶದಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹವರ ತ್ಯಾಗದ ಬಗ್ಗೆ ಭ್ರಷ್ಟಾಚಾರದ ಮಾಡನಾಡಿದ್ದು, ಸರಿಯಲ್ಲ ಎಂದು ಮೋದಿ ಮಾತಿಗೆ ಶ್ರೀನಿವಾಸ್ ಪ್ರಸಾದ್ ವಿರೋಧ ವ್ಯಕ್ತಪಡಿಸಿದರು.