ಬೆಂಗಳೂರು, ಡಿ. 13 : ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿರುವ ಪಟ್ಟದಕಲ್ಲನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಟ್ಟದಕಲ್ಲು ಅಭಿವೃದ್ಧಿ ದೃಷ್ಟಿಯಿಂದ ಮಲಪ್ರಭಾ ನದಿಯ ದಂಡೆಯಲ್ಲಿ 29.25 ಕೋಟಿ ರೂ.ವೆಚ್ಚದಲ್ಲಿ ವಾಣಿಜ್ಯ ಸಮುಚ್ಚಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಪ್ಲಾಜಾದಲ್ಲಿ ರೆಸ್ಟೊರೆಂಟ್, ಬಯಲು ರಂಗ ಮಂದಿರ, ಸ್ಥಳೀಯ ಕಲೆಗಳ ಪ್ರದರ್ಶನ ಕೇಂದ್ರ, ಪ್ರವಾಸಿಗರ ವಿಶ್ರಾಂತಿ ಕೇಂದ್ರ ಎಲ್ಲವನ್ನೂ ಒಂದೇ ಸೂರಿನಡಿ ನಿರ್ಮಿಸಲಾಗುವುದು ಎಂದು ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಈಗಾಗಲೇ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಹಂಪಿ ವಿವಿ ಕೇಂದ್ರ ಇರುವುದನ್ನು
ಹೊರತುಪಡಿಸಿ, ಬೇರೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಆರ್ಯ ವೈಶ್ಯ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ತೀರ್ಮಾನ, ಶಿಕ್ಷಣ ಹಾಗೂ
ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗದ ಆಯೋಗದಿಂದ ವರದಿ ಪಡೆಯಬೇಕಾಗುತ್ತದೆ. ನಂತರ ಮೀಸಲಾತಿ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.