ಮುಂಬೈ, ಡಿ. 10: ಆರೋಪಿ ಅಬ್ದುಲ್ 1 ವಾರದ ಹಿಂದೆಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಫ್ರಿಜ್ನಲ್ಲಿ ಇಟ್ಟಿದ್ದನು. ಅಲ್ಲದೆ, ಅದೇ ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜೊತೆಗೆ ಆರೋಪಿ ವಾಸವಿದ್ದನು. ಸೋಮವಾರ ಬೆಳಗ್ಗೆ ಔರಂಗಾಬಾದಿನ ಅಶೋಕ ನಗರದ ದೊಡ್ಡ ಚರಂಡಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮೃತದೇಹಗಳ ಭಾಗಗಳು ಪತ್ತೆಯಾಗಿತ್ತು. ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ತನಿಖೆ ನಡೆಸುತ್ತಿದ್ದ ವೇಳೆ ಮುಂಜಾನೆ ಓರ್ವ ವ್ಯಕ್ತಿ ಬಕೆಟ್ ಹಿಡಿದುಕೊಂದು ಇಬ್ಬರು ಮಕ್ಕಳ ಜೊತೆಗೆ ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ತಿಳಿಸಿದರು. ಆಗ ಪೊಲೀಸ್ ಅಧಿಕಾರಿ ಸೈಯದ್ ಸುಲೆಮನ್ ಘಟನೆ ನಡೆದಿರುವ ಪ್ರದೇಶದ ಸುತ್ತಮುತ್ತಲ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಸೋಮವಾರ ಮಧ್ಯಾಹ್ನದ ವೇಳೆಗೆ ಮೃತ ದೇಹದ ಇತರೆ ಭಾಗಗಳನ್ನೂ ಸಹ ಪೊಲೀಸರು ಆರೋಪಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.