ಚಾಮರಾಜನಗರ, ಅ.19 : ಪೊಲೀಸರಿಗೆ ತಲೆ ನೋವಾಗಿದ್ದ ಕಾಡುಗಳ್ಳ ವೀರಪ್ಪನ್ ಮೃತಪಟ್ಟು 15 ವರ್ಷ. 2004ರ ಅ. 18ರ ರಾತ್ರಿ ಎಸ್.ಟಿ.ಎಫ್. ಎನ್ ಕೌಂಟರ್ಗೆ ವೀರಪ್ಪನ್ ಬಲಿಯಾಗಿದ್ದರು. ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಕಾಡುಗಳಲ್ಲಿ ವೀರಪ್ಪನ್ ನೆಲೆಸಿದ್ದ. ಡಕಾಯಿತಿ ಹಾಗೂ ಅಪಹರಣ ಸೇರಿ ಅನೇಕ ಪ್ರಕರಣಗಳು ಈತನ ಮೇಲಿತ್ತು. ಕನ್ನಡ ಚಿತ್ರರಂಗದ ವರನಟ ಡಾ.ರಾಜ್ಕುಮಾರ್ರನ್ನು ಚಾಮರಾಜನಗರದ ಅವರು ಹುಟ್ಟೂರು ಗಾಜನೂರಿನಿಂದ ಅಪಹರಿಸಿ ಕಾಡಿನಲ್ಲಿ ತನ್ನೊಂದಿಗೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ವೀರಪ್ಪನ್ ಸತ್ತು 15 ವರ್ಷ ತಮಿಳುನಾಡಿನ ಮೂಲಕ್ಕಾಡುವಿನಲ್ಲಿ ತಿಥಿಕಾರ್ಯ ನಡೆದಿದೆ. ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕಿನ ಮೂಲಕ್ಕಾಡುವಿನಲ್ಲಿರುವ ವೀರಪ್ಪನ್ ಸಮಾಧಿಗೆ ತಿಥಿ ಕಾರ್ಯ ನೆರವೇರಿಸಿದ್ದಾರೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಅವರನ್ನು ಸ್ಮರಿಸಿದರು. ತಿಥಿ ಕಾರ್ಯ ಹಿನ್ನೆಲೆ ನೂರಾರು ಮಂದಿಗೆ ಅನ್ನಸಂತರ್ಪಣೆ ಮಾಡಿದರು. ಇನ್ನೊಂದೆಡೆ ಕಾರ್ಯ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೀರಪ್ಪನ್ ಅಭಿಮಾನಿಗಳು ಮುತ್ತುಲಕ್ಷ್ಮಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.