ವಾರಾಣಸಿ, ನ .8 : ಉತ್ತರ ಪ್ರದೇಶದ ವಾರಾಣಸಿಗೆ ಪ್ರವಾಸ ಹೋದಾಗ ರೈಲು ನಿಲ್ದಾಣಗಳಲ್ಲಿ ಘೋಷಿಸಲಾಗುವ ಹಿಂದಿ ಭಾಷೆ ನಮಗೆ ಅರ್ಥವಾಗುವುದಿಲ್ಲ ಎಂಬ ಕಿರಿಕಿರಿ ಇನ್ನಿಲ್ಲ.
ಏಕೆಂದರೆ ಇನ್ನು ಮುಂದೆ ಇಲ್ಲಿನ ರೈಲು ನಿಲ್ದಾಣದಲ್ಲಿ ಕನ್ನಡ ಭಾಷೆಯಲ್ಲೂ ಘೋಷಣೆಗಳನ್ನು ಆಲಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ದಕ್ಷಿಣ ಭಾರತದಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ.
ಕನ್ನಡ ಮಾತ್ರವಲ್ಲದೆ, ದಕ್ಷಿಣದ ಭಾಷೆಗಳಾದ ತಮಿಳು, ತೆಲುಗು ಹಾಗೂ ಮಲಯಾಳದಲ್ಲೂ ಘೋಷಣೆಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಹಿಂದಿಯೇತರ ಭಾಷೆ ಮಾತನಾಡುವ ಜನರಿಗೆ ಸುಲಭವಾಗಲೆಂದು ರೈಲ್ವೇ ಇಲಾಖೆ ಈ ಕ್ರಮ ಕೈಗೊಂಡಿದೆ.