ಬೆಳಗಾವಿ, ಏ. 16, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಯ ಕುರಿತು ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಳ್ಳಿಹಳ್ಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಆ ಒಂದು ಗ್ರಾಮಕ್ಕೆ ಯಾವೊಬ್ಬ ಕಾರ್ಯಕರ್ತರಾಗಲಿ ಅಭ್ಯರ್ಥಿಯಾಗಲಿ ವೋಟ್ ಕೇಳಲು ಹೋಗುತ್ತಿಲ್ಲ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೊನೆಯ ಹಳ್ಳಿ ಈ ಇಟ್ನಾಳ. ಕಳೆದ 1 ತಿಂಗಳಿಂದ ಈ ಗ್ರಾಮದಲ್ಲಿ ಮಾರಕ ಚಿಕೂನ್ ಗುನ್ಯಾ ಕಾಯಿಲೆ ಎಡೆ ಎತ್ತಿದೆ. ಪ್ರತಿಯೊಂದು ಮನೆಯಲ್ಲೂ ಈ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಅಥವಾ ಮೂರು ಜನರಿದ್ದಾರೆ. ಚಿಕಿತ್ಸೆ ಪಡೆದುಕೊಂಡರೂ ಕೂಡ ಕಾಯಿಲೆ ಮಾತ್ರ ಕಮ್ಮಿಯಾಗುತ್ತಿಲ್ಲವಂತೆ.
ಕಳೆದ 15 ದಿನಗಳಿಂದ ಆರೋಗ್ಯ ಇಲಾಖೆಯ ಗಮನಕ್ಕೂ ತಂದಾಗ ವೈದ್ಯರು 1 ವಾರದ ಹಿಂದೆ ಬಂದು ಹೋದವರು ಮತ್ತೆ ವಾಪಾಸ್ ಬಂದೇ ಇಲ್ಲವಂತೆ. ಸದ್ಯ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಇಲ್ಲಿ ಜನ ಈ ಚಿಕೂನ್ ಗುನ್ಯಾ ಕಾಯಿಲೆಯಿಂದ ಒದ್ದಾಡುತ್ತಿದ್ದಾರೆ.
ಎದ್ದು ಓಡಾಡಲು ಕೂಡ ಆಗದ ಸ್ಥಿತಿ ಇದ್ದದ್ದರಿಂದ ಅನಿವಾರ್ಯವಾಗಿ ಗ್ರಾಮದಲ್ಲಿರುವ ಆರ್.ಎಂ.ಪಿ ಡಾಕ್ಟರ್ಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರವರ ಮನೆಯಲ್ಲೇ ಸಲಾಯಿನ್ ಹಚ್ಚಿಕೊಂಡು ಔಷಧಿ ಪಡೆಯುತ್ತಿದ್ದರೂ ಕಾಯಿಲೆ ಮಾತ್ರ ಕಮ್ಮಿಯಾಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಇಡೀ ಊರಿಗೆ ಊರೇ ಕಾಯಿಲೆಯಿಂದ ಬಳಲುತ್ತಿರುವುದರಿಂದ ಈ ಗ್ರಾಮಕ್ಕೆ ಚುನಾವಣೆಯ ಕಾವು ಕೂಡ ತಟ್ಟುತ್ತಿಲ್ಲ. ವಿಪರ್ಯಾಸ ಅಂದರೆ, ಇಲ್ಲಿ ವೋಟ್ ಕೇಳಲು ಹೋದರೆ ನಮಗೂ ತೊಂದರೆ ಆಗಬಹುದು ಎಂದುಕೊಂಡಿರುವ ವಿವಿಧ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಕೂಡ ಇಟ್ನಾಳ ಗ್ರಾಮದತ್ತ ಸುಳಿಯುತ್ತಿಲ್ಲ.