ಕೊಳ್ಳೆಗಾಲ: ಅಕ್ಕ ಪಕ್ಕದ ಮನೆಯವರು ಎಂದ ಮೇಲೆ ಕಷ್ಟ ಸುಖದಲ್ಲಿ ಭಾಗಿಯಾಗುವುದು ಸಹಜ. ಅದೇ ರೀತಿ ವೃದ್ಧೆಯೊಬ್ಬಳು ಪಕ್ಕದ ಮನೆಯ ಹೆಂಗಸಿಗೆ ಕಷ್ಟ ಕಾಲದಲ್ಲಿ ಸಹಾಯವಾಗಲೆಂದು ಸಾಲ ಕೊಟ್ಟು ಇದೀಗ ಅದೇ ಹಣದಿಂದಾಗಿ ಇಹಲೋಕ ತ್ಯಜಿಸಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಕೊಳ್ಳೆಗಾಲದ ಮಧುವನಹಳ್ಳಿ ನಿವಾಸಿ ಶಿವಮ್ಮ ತನ್ನ ನೆರೆ ಮನೆಯ ನಂಜಮಣಿ ಹೆಸರಿನ ಮಹಿಳೆಗೆ ಸಾಲ ಕೊಟ್ಟಿದ್ದಳಂತೆ. ಆಕೆ ಎಷ್ಟು ದಿನವಾದರೂ ಸಾಲವನ್ನು ವಾಪಾಸು ಮಾಡಿರಲಿಲ್ಲವಂತೆ. ಹಾಗಾಗಿ ಸಾಲದ ಹಣವನ್ನು ವಾಪಾಸು ಮಾಡುವಂತೆ ಶಿವಮ್ಮ ಒತ್ತಾಯಿಸಿದ್ದಾಳೆ. ಆದರೆ ಸಾಲದ ಹಣ ವಾಪಾಸಾಗುವುದರಷ್ಟರೊಳಗೆ ಆಕೆ ಹೆಣವಾಗಿದ್ದಾಳೆ. ಯಾರೋ ದುಷ್ಕರ್ಮಿಗಳು ವೃದ್ಧೆಯನ್ನು ಕೊಲೆ ಮಾಡಿ ಆಕೆಯ ಕಾಲಿಗೆ ಕಲ್ಲು ಕಟ್ಟಿ ಬಾವಿಯೊಳಗೆ ಎಸೆದಿದ್ದಾರೆ.
ವೃದ್ಧೆಯ ಕೊಲೆಯಾದಾಗಿನಿಂದ ನಂಜಮಣಿಯ ಮಗ ಶಿವು (19) ಮತ್ತು ಆತನ ಸ್ನೇಹಿತ ರಾಜು(18) ನಾಪತ್ತೆಯಾಗಿದ್ದಾರೆ. ಆ ಕಾರಣ ಅವರಿಬ್ಬರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳು ಸಿಕ್ಕ ನಂತರ ನಿಜಾಂಶ ಹೊರ ಬೀಳಬೇಕಿದೆ.