ತಾಳಿಕೋಟೆ: ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸಾಮಾಜಿಕ ವಿರೋಧಗಳು ದಟ್ಟವಾಗಿದ್ದ ಕಾಲದಲ್ಲಿಯೇ ಜಾತಿವಾದಿಗಳನ್ನು ವಿರೋಧಿಸಿ ದೀನದಲಿತರು ಮತ್ತು ನಿರ್ಲಕ್ಷಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹೆಗ್ಗಳಿಕೆ ಸಾವಿತ್ರಿಬಾಯಿ ಪುಲೆ ದಂಪತಿಗೆ ಸಲ್ಲಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮಂಗಲಾ ಕೋಳೂರ ಹೇಳಿದರು.
ಅವು ಪಟ್ಟಣದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಘಟಕ ಮತ್ತು ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಸಾವಿತ್ರಿಬಾಯಿ ಫುಲೆಯವರ 190ನೇ ಜಯಂತಿ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯವಿವಾಹ ರೂಢಿಯಿದ್ದ ಕಾಲದಲ್ಲಿ ಸಾವಿತ್ರಿಬಾ ಫುಲೆ ಮದುವೆಯಾದಾಗ 8 ವರ್ಷ. ಅವರಿಗೆ ಮೊದಲ ಪಾಠಶಾಲೆ ಪತಿಯಿಂದಲೇ ಪ್ರಾರಂಭವಾಯಿತು. 1847ರಲ್ಲಿ ಇವರು ಶ್ರೀಮತಿ ಮಿಚೆಲ್ ಅವರ ಶಾಲೆಯಲ್ಲಿ ಶಿಕ್ಷಕಿ ತರಬೇತಿ ಪಡೆದು ದೇಶದಲ್ಲಿ ಮೊದಲ ಮಹಿಳಾ ಶಿಕ್ಷಕಿಯಾದರು ಎಂದರು.
ಪ್ರಾಚಾರ್ಯ ಡಾ.ಎಮ್.ಎಸ್.ಪಾಟೀಲ ಮಾತನಾಡಿ, ನಾ ಹೆಚ್ಚು ನೀ ಹೆಚ್ಚು ಎನ್ನದೆ ಪುರುಷ ಮತ್ತು ಮಹಿಳೆ ಇಬ್ಬರು ಸರಿಸಮಾನರು ಪ್ರತಿಯೊಬ್ಬರಿಗೂ ಅಕ್ಷರ ಕಲಿಯುವ ಹಕ್ಕಿದೆ ಎಂದು ಪ್ರತಿಪಾದಿಸಿದ ಫುಲೆ ದಂಪತಿಗಳ ಕ್ರಾಂತಿಕಾರಕ ವಿಚಾರಗಳನ್ನು ನಾವು ಒಪ್ಪಬೇಕು ಎಂದರು.