ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ
(ರಾಷ್ಟ್ರಕವಿ ಕುವೆಂಪು ಅವರ ಪುತ್ರ) ಅವರ ‘ಜುಗಾರಿ ಕ್ರಾಸ್’ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ
ಸಿನಿಮಾವಾಗಲು ಮುಹೂರ್ತ ಕೂಡಿಬಂದಿದೆ. ಒಂದು ದಶಕದಿಂದ ಈ ಕಥೆಯನ್ನು ತೆರೆ ಮೇಲೆ ತರಬೇಕು ಎಂದು
ಪ್ರಯತ್ನಿಸಿದ್ದರ ಫಲ ಇಂದು ಕೈಗೂಡಿದೆ.
ಕೆಲವು ವರ್ಷಗಳ ಹಿಂದೆ ನಿರ್ದೇಶಕ ಕೂಡ್ಲು ರಾಮಕೃಷ್ಣ ಹಾಗೂ ಟಿ.ಎಸ್.ನಾಗಾಭರಣ ಈ ‘ಜುಗಾರಿ ಕ್ರಾಸ್’ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿದ್ದರು. ಈಗ ಶ್ರೀಮತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರಿಂದ ‘ಜುಗಾರಿ ಕ್ರಾಸ್’ ಕಾದಂಬರಿಯ ಹಕ್ಕನ್ನು ನಿರ್ಮಾಪಕ ಮತ್ತು ನಟ ಕಡ್ಡಿಪುಡಿ ಚಂದ್ರು ಪಡೆದು ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ಕೂಡ್ಲು ರಾಮಕೃಷ್ಣ, ಡಾ. ಶಿವರಾಜಕುಮಾರ್ ಮುಖ್ಯ ತಾರಾಗಣದಲ್ಲಿ ಈ ಸಿನಿಮಾವನ್ನು ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ಟಿ.ಎಸ್. ನಾಗಾಭರಣ ಚಿರಂಜೀವಿ ಸರ್ಜಾ ಅವರನ್ನು ನಾಯಕ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ನಿರ್ದೇಶನ ಮಾಡಿ ನಿರ್ದೇಶಕಿ ಸುಮನಾ ಕಿತ್ತೂರ್ ಜಯಭೇರಿ ಬಾರಿಸಿದ್ದರು. ಇದೀಗ ಅವರ ಮತ್ತೊಂದು ಕಾದಂಬರಿ ಸಿನಿಮಾವಾಗಲು ಹೊರಟಿದೆ. ‘ಜುಗಾರಿ ಕ್ರಾಸ್’ ಸಿನಿಮಾಕ್ಕೆ ಭಾನುವಾರ ಬೆಳಗ್ಗೆ ಬೆಂಗಳೂರಿನ ನಿಮಿಷಾಂಬ ದೇವಸ್ಥಾನ ಜಯನಗರ 6 ನೇ ಬ್ಲಾಕ್ನಲ್ಲಿ ಮುಹೂರ್ತ ನಡೆಯಲಿದೆ. ಶುಭಾರಂಭಕ್ಕೆ ಪವರ್ಸ್ಟಾರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಅಶ್ವಿನಿ ಪುನೀತ್, ಸರಸ್ವತಿ ಚಂದ್ರು, ತಾರಾ ವೇಣು ಹಾಜರಾಗಲಿದ್ದಾರೆ.
ಸಿನಿಮಾಕ್ಕೆ ಹರೀಶ್ ಹಾಗಲವಾಡಿ ಸಂಭಾಷಣೆ ಬರೆದಿದ್ದಾರೆ. ಹೆಚ್.ಸಿ. ವೇಣು ಛಾಯಾಗ್ರಹಣ ಮಾಡಲಿದ್ದಾರೆ. ವಾಸುಕಿ ವೈಭವ್ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.