ಬೆಂಗಳೂರು , ಅ. 21: ನಗರದಲ್ಲಿ ಚಿಲ್ಲರೆ ಗ್ಯಾಂಗ್ ಆರ್ಭಟ ಜೋರಾಗಿದೆ. ಬಸ್ ಹತ್ತುವ ಚಾಲಾಕಿಗಳು, ಸಹ ಪ್ರಯಾಣಿಕರ ಎದುರು ಚಿಲ್ಲರೆ ಕಾಸು ಬಿಸಾಕುತ್ತಾರೆ. ಅದನ್ನು ಎತ್ತಿಕೊಡಿ ಎಂದು ಕೇಳುತ್ತಾರೆ.
ಹೋಗಲಿ ಪಾಪ ಎಂದು ಕೆಳಗೆ ಬಗ್ಗಿ ಚಿಲ್ಲರೆ ಎತ್ತಿಕೊಡುವಷ್ಟರಲ್ಲಿ ನಿಮ್ಮ ಪರ್ಸ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನೇ ಲಪಟಾಯಿಸಿ ಪರಾರಿಯಾಗುತ್ತಾರೆ. ಒಂದು ಗ್ಯಾಂಗ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೃದ್ಧೆಯನ್ನು ಲೂಟಿ ಮಾಡಿದೆ. ಹಿರಿಯ ನಾಗರಿಕರ ಮಹಿಳೆಯೊಬ್ಬರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಆಕೆಯ ಕಾಲ ಬಳಿ ಚಿಲ್ಲರೆ ಹಣ ಬಿತ್ತು. ಹಣ ಬೀಳಿಸಿದ ಮಹಿಳೆ ಎರಡು ಮಕ್ಕಳನ್ನು ಎತ್ತಿಕೊಂಡಿದ್ರು. ಹೀಗಾಗಿ, ಆಕೆ ಕೆಳಗೆ ಬಗ್ಗಿ ಚಿಲ್ಲರೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ವೃದ್ಧೆ, ಆಕೆಗೆ ನೆರವಾಗಲು ಮುಂದಾದರು. ತಾವೇ ಕೆಳಗೆ ಬಗ್ಗಿ ಚಿಲ್ಲರೆ ಹಣ ಎತ್ತಿಕೊಡಲು ಮುಂದಾಗಿದ್ದಾರೆ. ಅಷ್ಟರಲ್ಲೇ ವೃದ್ಧೆಯ ಪರ್ಸ್ ಎಗರಿಸಿದ್ದಾಳೆ ಚಾಲಾಕಿ ಮಹಿಳೆ!
ವೃದ್ಧೆಯ ಪರ್ಸ್ನಲ್ಲಿ 14 ಸಾವಿರ ರೂ. ಹಣವಿತ್ತು. ಚಿಲ್ಲರೆ ಕಾಸು ಎತ್ತಿಕೊಟ್ಟ ಸಂದರ್ಭದಲ್ಲೂ ವೃದ್ಧೆಗೆ ತಾವು ಹಣ ಕಳೆದುಕೊಂಡಿರುವುದು ಗೊತ್ತಿರಲಿಲ್ಲ. ಬಸ್ಸಿನಿಂದ ಕೆಳಗಿಳಿದ ಮೇಲೆ ತಮ್ಮ ಪರ್ಸ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡ್ಲು ನಿವಾಸಿಯಾದ ೬೩ ವರ್ಷದ ವೃದ್ಧ ಮಹಿಳೆ ತಿರುಪತ್ತೂರಿನಿಂದ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ.
ತಮ್ಮ ಪಕ್ಕದಲ್ಲೇ ಕುಳಿತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕೃತ್ಯ ಎಸಗಿದ್ದಾಳೆ ಎಂದು ವೃದ್ಧೆ ಅಳಲು ತೋಡಿಕೊಂಡರು. 2 ಮಕ್ಕಳನ್ನು ಎತ್ತಿಕೊಂಡಿದ್ದ ಮಹಿಳೆ ಕೆಳಗೆ ಬಗ್ಗಲು ಸಾಧ್ಯವಿಲ್ಲ ಎಂದು ಮಾನವೀಯತೆ ತೋರಿಸಿದ್ದೇ ತಪ್ಪಾಗಿ ಪರಿಣಮಿಸಿದೆ. ಅಚಾನಕ್ಕಾಗಿ ಕೆಳಗೆ ಬಿದ್ದ ಕಾಯಿನ್ ಎತ್ತಿಕೊಡುವ ಸಂದರ್ಭದಲ್ಲಿ ವೃದ್ಧೆ ತಮ್ಮ ತೊಡೆಯ ಮೇಲಿದ್ದ ಬ್ಯಾಗ್ ಅನ್ನು ಮಹಿಳೆಗೆ ಕೊಟ್ಟಿದ್ದಾರೆ. ಕೆಲವೇ ಸೆಕೆಂಡ್ನಲ್ಲಿ ಕೆಳಗೆ ಬಿದ್ದಿದ್ದ ಕಾಯಿನ್ ಎತ್ತಿ ಮಹಿಳೆಗೆ ಕೊಟ್ಟಿದ್ದಾರೆ.
ಅಷ್ಟರಲ್ಲೇ ಮಹಿಳೆ ತನ್ನ ಕೈಚಳಕ ತೋರಿಸಿದ್ದಾಳೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಳಿಯಬೇಕಿದ್ದ ಮಹಿಳೆ, ಅದಕ್ಕೂ ಮುನ್ನವೇ ತರಾತುರಿಯಿಂದ ಬಸ್ಸಿನಿಂದ ಕೆಳಗಿಳಿದಿದ್ದಾಳೆ. 35 ವರ್ಷ ವಯಸ್ಸಿನ ಮಹಿಳೆ 12 ವರ್ಷದ ಮಗಳು, 2 ವರ್ಷದ ಮಗನೊಂದಿಗೆ ಬಸ್ ಏರಿ ಕ್ಷಣಾರ್ಧದಲ್ಲಿ ಪರ್ಸ್ ಎಗರಿಸಿರೋದು ಪೊಲೀಸರಿಗೂ ತಲೆನೋವಾಗಿದೆ. ಬಸ್ನಲ್ಲಿ ಪ್ರಯಾಣಿಸುವಾಗ ಜನರು, ಪಿಕ್ ಪಾಕೆಟರ್ಗಳಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.