ನವದೆಹಲಿ, ಡಿ. 10: ರಾಜ್ಯದ ಉಪಚುನಾವಣೆಯಲ್ಲಿ ಅತಿ ಹೆಚ್ಚು ಕೂತುಹಲ ಮೂಡಿಸಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ನೆರವಿಲ್ಲದೇ ನನ್ನ ಮಗ ಶರತ್ ಗೆದ್ದಿರುವುದು ಖುಷಿ ಇದೆ ಎಂದು ಬಿಜೆಪಿ ನಾಯಕ, ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಚ್ಚೇಗೌಡ ಹೇಳಿದ್ದಾರೆ. ಆದರೆ ಇದೇ ವೇಳೆ, ಚುನಾವಣೆಯಲ್ಲಿ ನಾನೇನು ಪುತ್ರನ ಪರವಾಗಿ ಕೆಲಸ ಮಾಡಿರಲಿಲ್ಲ. ಅವನು ಅವನ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದಾನೆ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಚ್ಚೇಗೌಡ, ‘ಎಂಟಿಬಿ ನಾಗರಾಜ… ಅವರ ವರ್ತನೆ ಸರಿಯಿರಲಿಲ್ಲ. ಅವರು 1,200 ಕೋಟಿ ರೂ.ಗಳ ಆಹಂ ತೋರಿಸಿದ್ದೆ ಅವರಿಗೆ ಮುಳುವಾಯಿತು. ತನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಎಂಟಿಬಿ ಮೇಲೆ ಕೋಪವಿತ್ತು. ಕ್ಷೇತ್ರದಲ್ಲಿ ಕುರುಬರ ಮತ ಇಬ್ಬಾಗವಾದ ಕಾರಣಕ್ಕೆ ಎಂಟಿಬಿ ಸೋತಿದ್ದಾರೆ ಎಂದು ಬಚ್ಚೇಗೌಡ ಅಭಿಪ್ರಾಯ ಪಟ್ಟರು.
ನಾನು ಸಂಸದನಾಗಿದ್ದು ನನ್ನ ಕ್ಷೇತ್ರದಲ್ಲೇ ಹೊಸಕೋಟೆಯು ಬರುತ್ತದೆ. ಅಭಿವೃದ್ಧಿ ಕೆಲಸ, ಸಂಸದರ ನಿಧಿ ಬಳಕೆ ಮುಂತಾದ ವಿಷಯಗಳ ಬಗ್ಗೆ ನಾನು ಆತನೊಂದಿಗೆ ಮುಂದಿನ ದಿನಗಳಲ್ಲಿ ಸಮಾಲೋಚಿಸುತ್ತೇನೆ ಎಂದು ಬಚ್ಚೇಗೌಡರು ಹೇಳಿದ್ದಾರೆ.