ಪಾಟೀಲ ಪುಟ್ಟಪ್ಪ ಚಿಕಿತ್ಸೆಗೆ ಸ್ಪಂದನೆ

ಪಾಟೀಲ ಪುಟ್ಟಪ್ಪ ಚಿಕಿತ್ಸೆಗೆ ಸ್ಪಂದನೆ

ಹುಬ್ಬಳ್ಳಿ, ಫೆ. 25: ಈ ನಾಡು ಕಂಡ ಅಪರೂಪದ ಕನ್ನಡ ಹೋರಾಟಗಾರ, ನಾಡೋಜ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರೇ ಬದುಕೇ ಒಂದು ಸ್ಪೂರ್ತಿ. ಕನ್ನಡಿಗರು ಪುಟ್ಟಪ್ಪವರನ್ನು ಎಂದಿಗೂ ಮರೆಯುವುದಿಲ್ಲ ಅವರ ಹೋರಾಟವೇ ಅಂತಹದು. ಕನ್ನಡ ಪತ್ರಿಕೋದ್ಯಮದ ಧೀಮಂತ ಪಾಟೀಲ ಪುಟ್ಟಪ್ಪ. ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಕನ್ನಡಿಗರೆಲ್ಲರಿಗೆ `ಪಾಪು’ ಎಂದೇ ಚಿರಪರಿಚಿತರಾದ  ಪಾಟೀಲ ಪುಟ್ಟಪ್ಪನವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನರ ಮನಸ್ಸಿನಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕ್ರತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ. ಇಂತಹಾಮೇರು ವ್ಯಕ್ತಿತ್ವ ಇಂದು ನೂರನೇ ವಸಂತಕ್ಕೆ ಕಾಲಿಡುತ್ತಿದೆ. ಅವರು ಬಾಳಿ ಬದುಕಿದ ದಾರಿ ಎಲ್ಲರಿಗೂ ಈಗ ದಾರಿ ದೀಪ.

14 ಜನವರಿ 1919ರಲ್ಲಿ , ಹಾವೇರಿ ತಾಲೂಕಿನ ಕುರುಬವಗೊಂಡದಲ್ಲಿ ಜನಿಸಿದ ಪುಟ್ಟಪ್ಪ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ. ಸ್ವಗ್ರಾಮ ಹಾಗೂ ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಲಿಂಗರಾಜ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದಾರೆ. ವಿಜಯಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಪುಟ್ಟಪ್ಪ ಅಲ್ಲಿ ಸರಿಯಾದ ಕಕ್ಷಿದಾರರು ಸಿಕ್ಕದೆ ಊಟಕ್ಕೆ ಪರದಾಡುವಂತಹಾ ಕಷ್ಟಕರ ಬದುಕು ನೋಡಬೇಕಾಗಿತ್ತು. ಬಳಿಕ ಅಲ್ಲಿಂದ ಜೀವನ ಅರಸಿ ಮುಂಬೈಗೆ ತೆರಳಿದ ಇವರು ಅಲ್ಲಿ ನ್ಯಾಯಾಲಯಕ್ಕಿಂತ ಹೆಚ್ಚು ಪತ್ರಿಕಾ ಕಚೇರಿಗಳಲ್ಲಿ ಸಮಯ ಕಳೆದಿದ್ದರು.

ಫ್ರೀ ಪ್ರೆಸ್ ಜರ್ನಲ್ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಅವರೊಡನೆ ಸ್ನೇಹ ಬೆಳೆಸಿದ ಪುಟ್ಟಪ್ಪ ತಾವೂ ಪತ್ರಿಕೋದ್ಯಮಿ ಯಾಗಬೇಕೆಂಬ ಹಂಬಲಕ್ಕೆ ಬಿದ್ದು, ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎ ಪದವಿ ಪಡೆದಿದ್ದರು. ಅಲ್ಲಿಂದ ಹಿಂತಿರುಗಿದ ಮೇಲೆ 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರಿಮಾಸಿಕ ಸೇರಿ ನಾನಾ ಪತ್ರಿಕೆಗಳಲ್ಲಿ ದುಡಿದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ಮಾಡಿದರು.

ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು. ಪತ್ರಿಕಾ ಸಂಪಾದಕರಾಗಿ ಮನೆಮಾತಾದ ಪುಟ್ಟಪ್ಪ ಸಾರ್ವಜನಿಕ ರಂಗಗಳಲ್ಲಿ ಸಹ ಸಾಕಷ್ಟು ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ನಾನಾ ಹೋರಾಟದಲ್ಲಿ ಭಾಗವಹಿಸಿದ್ದರು.

ಇಷ್ಟೇ ಅಲ್ಲದೆ ವಿದ್ಯಾರ್ಥಿಯಾಗಿದ್ದಾಗಲೇ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು. ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರು ನೂರರ ವಸಂತ ತಲುಪಿದ ಇಂದಿಗೂ ಕನ್ನಡದ ಪರ ಜಾಗೃತ ಮನಸ್ಸುಳ್ಳವರಾಗಿದ್ದಾರೆ. ಸಾಹಿತಿಯಾಗಿ ಏಕ ಪುಸ್ತಕಗಳನ್ನು ಪ್ರಕಟಿಸಿರುವ ಪುಟ್ಟಪ್ಪ ಅವರ ಪ್ರಮುಖ ಕೃತಿಗಳೆಂದು ಹೆಸರಿಸಬಹುದು. ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿ ಕನ್ನಡದ ಪ್ರಮುಖ ಸಾಹಿತಿ, ಪತ್ರಿಕೋದ್ಯಮಿ, ಹೋರಾಟಗಾರರಾಗಿ ಪುಟ್ಟಪ್ಪನವರ ಸಾಧನೆಗೆ ಮನ್ನಣೆಯಾಗಿ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ನೃಪತುಂಗ ಪ್ರಶಸ್ತಿಗಳು ಪ್ರಮುಖವಾಗಿದೆ. ಇದಲ್ಲದೆ ಪಾಪು ಅಭಿಮಾನಿಗಳೂ ಸಮರ್ಪಿಸಿದ ಗೌರವ ಗ್ರಂಥ `ಪ್ರಪಂಚದ ಪಾಪು’ ಮತ್ತು `ನಾನು ಪಾಟೀಲ ಪುಟ್ಟಪ್ಪ.’ ಸಹ ಅವರ ಜೀವನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. 101 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು ಅವರ ಉತ್ಸಾಹ ಇನ್ನೂ ಇಪ್ಪತ್ತನೆಯ ವರ್ಷದಷ್ಟು. ಇಂದು ಅವರ ಕನ್ನಡ ಪರ ಹೋರಾಟ, ಅನ್ಯಾಯದ ವಿರುದ್ಧ ಗುಡುಗುವುದು ಒಂದು ಗಟ್ಟಿತನದ ಹೋರಾಟಗಾರನ ನಿಜವಾದ ಹೆಜ್ಜೆಯಾಗಿದೆ.

ಚೇತರಿಕೆಗೆ ಹಾರೈಕೆ

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನವರು ಅನಾರೋಗ್ಯದ ಸಂದರ್ಭದಲ್ಲಿ ಅವರ ಶಿಷ್ಯರು, ಅಭಿಮಾನಿಗಳು, ಗಣ್ಯರು ಕಿಮ್ಸ್ ಆಸ್ಪತ್ರೆಗೆ ತೆರಳಿ ಶುಭ ಹಾರೈಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos