ಕೋಲಾರ: ಬೇತಮಂಗಲ ಹೋಬಳಿ ಹಂಗಳ ಗ್ರಾಮದ ಅಪ್ರಾಪ್ತ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿರುವ ಕಾಮುಕರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಂಗಳ ಗ್ರಾಮದ ನಿವಾಸಿ ದಲಿತ ಕುಟುಂಬಕ್ಕೆ ಸೇರಿದ ಹೆಣ್ಣುಮಗಳ ಮೇಲೆ ಅದೇ ಗ್ರಾಮದ ಹರೀಶ್, ರಘು, ಸುಹೇಲ್, ಜಗದೀಶ್ ಎಂಬುವವರು ಅತ್ಯಾಚಾರವೆಸಗಿರುತ್ತಾರೆ. ಈ ಘಟನೆಯಿಂದ ನೊಂದ ಹೆಣ್ಣು ಮಗಳ ಮಾನ ಹಾನಿಗೆ ಇಡೀ ಕುಟುಂಬ ಕಣ್ಣೀರಿಡುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇವೆ. ಘಟನೆಗೆ ಕಾರಣರಾದವರು ಪ್ರಭಾವಿಗಳಾಗಿರುವುದರಿಂದ ಶಿಕ್ಷೆಯಿಂದ ಪಾರಾಗಿರುವ ಘಟನೆಗಳೇ ಹೆಚ್ಚಾಗಿವೆ. ಬಿಗಿಯಾದ ಕಾನೂನುಗಳು ಇದ್ದರೂ ಸಹ ಇಂತಹ ಘಟನೆಗಳು ಮರುಕಳಿಸಿ ದಲಿತರ ಮಾನ ಪ್ರಾಣ ಉಳಿಸಿಕೊಳ್ಳುವುದು ದುಸ್ತರವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರಕ್ಕೆ ಪೊಸ್ಕೋ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡು ಕಾಮುಕರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ನೊಂದ ಬಾಲಕಿ ಮತ್ತು ಅವರ ಕುಟುಂಬಕ್ಕೆ ಸಾಂತ್ವಾನ ಹಾಗೂ ನ್ಯಾಯ ಒದಗಿಸಿಕೊಡುವುದರ ಜೊತೆಗೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕಠಿಣ ಕಾನೂನು ಕ್ರಮ ವಹಿಸಬೆಕೆಂದು ಒತ್ತಾಯಿಸಿದ್ದಾರೆ.