ಶಹಾಪುರ: ನಗರದ ಹೊರವಲಯದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮತ್ತು ಅತ್ಯಾಚಾರ ವೇಸಗಿದ ಕಾಮುಕರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹಳೆ ತಹಶೀಲ್ದಾರ್ ಕಚೇರಿಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಹೊಸ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆಯ ಮೂಲಕ ತಹಸೀಲ್ದಾರ್ ಮೂಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ ರಾಜ್ಯ ಉಪಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ ಮಾತನಾಡಿ, ಪರಿಶಿಷ್ಟ ಜಾತಿಯ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸರ್ಕಾರ ಮಾತ್ರ ಕೈ ಕಟ್ಟಿ ಕುಳಿತುಕೊಂಡಿದ್ದು ಯಾವುದೇ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. ಹಲ್ಲೆಕೋರರಿಗೆ ಕಾನೂನಿನ ಭಯ ಇಲ್ಲದಂತಾಗಿದೆ.
ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ಮಹಿಳೆ ಬಸ್ಗಾಗಿ ಕಾದು ಕುಳಿತಿದ್ದ ವೇಳೆ 4 ಜನರÀ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅತ್ಯಾಚಾರವೆಸಗಿ, ನಗ್ನಗೊಳಿಸಿ ವಿಕೃತಿ ಮೆರೆದ ಕ್ರಿಮಿಗಳನ್ನು ಗಲ್ಲಿಗೇರಿಸಬೇಕು. ಮಹಿಳೆಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ಒದಗಿಸಬೇಕು.
ಕೋಲಾರ ಜಿಲ್ಲೆಯ ತಡಗೋಲ್ ಗ್ರಾಮದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಹಲ್ಲೆ ನಡೆಸಿದ ದುಷ್ಟರಿಗೆ ಕಠಿಣ ಶಿಕ್ಷೆ ನೀಡಬೇಕು. ಮತ್ತು ಸುರಪೂರ ಪಟ್ಟಣದಲ್ಲಿ ಭಗವಾನ ಬುದ್ಧನ ಮೂರ್ತಿಯನ್ನು ಭಗ್ನಗೊಳಿಸಿ ಅಶಾಂತಿ ಮೂಡಿಸಿದ್ದ ಕಿಡಿಗೇಡಿಗಳನ್ನು ಬಂಧಿಸಿ ಕೂಡಲೇ ಕಾನೂನು ಕ್ರಮ ಕೈಗೊಂಡು, ಪುನಃ ಮೂರ್ತಿಯನ್ನು ಸ್ಥಾಪಿಸಿ ರಕ್ಷಣೆ ಒದಗಿಸಬೇಕು.
ಇಂತಹ ಪ್ರಕರಣಗಳು ನಿತ್ಯ ಹೆಚ್ಚುತ್ತಲೇ ಇದ್ದು ಸರ್ಕಾರ ಕೂಡಲೇ ಇವೆಲ್ಲವುಗಳನ್ನು ತಡೆಯಲು ಮುಂದಾಗಬೇಕಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಂಘಟನೆಯ ಒಕ್ಕೂಟದಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾವಾದಿಗಳಾದ ಆರ್. ಚನ್ನುಬಸ್ಸು, ಶಿವಪುತ್ರಪ್ಪ ಜವಳಿ, ರಾಯಪ್ಪ ಸಾಲಿಮನಿ, ಮಹಾದೇವ ದಿಗ್ಗಿ, ಹೊನ್ನಪ್ಪ ಗಂಗನಾಳ, ರಾಮಣ್ಣ ಸಾದ್ಯಾಪುರ, ಮಂಗಳ ಮುಖಿಯರ ತಾಲ್ಲೂಕು ಅಧ್ಯಕ್ಷೆ ನಿಂಗಮ್ಮ, ಜನವಾದಿ ಸಂಘಟನೆಯ ಸುನಂದಾ ಮದ್ರಕಿ, ಶೋಭಾ ಇನಾಂದಾರ್, ಮರೆಪ್ಪ ಕನ್ಯಾಕೊಳ್ಳುರ, ಶರಣಪ್ಪ ಭೂತ್ಥಾಳಿ, ಶರಣಪ್ಪ ಅನ್ಸೂರ, ಶರಣಪ್ಪ ಕೊಂಬಿನ್, ಶಾಂತಪ್ಪ ಸಾಲಿಮನಿ, ಅಶೋಕ ಹೊಸ್ಮನಿ, ಲಕ್ಷ್ಮಣ ರಸ್ತಾಪೂರ, ಮರೆಪ್ಪ ಜಾಲಿಬಂಚಿ, ಶಿವು ದೊರನಹಳ್ಳಿ, ಚಂದ್ರಶೇಖರ ಶಹಾಪುರ, ಸಿದ್ದು ಮುಂಡಾಸ, ಮಲ್ಲು ಇದ್ದರು.