ಕೋಲಾರ: ಗ್ರಾಮಾಂತರ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡುತ್ತಿರುವ ವೋಲ್ವೋ ಕಂಪನಿಯ ಕಾರ್ಯ ಶ್ಲಾಘನೀಯ ಎಂದು ಮಾಲೂರು ಶಾಸಕ ಕೆ.ವೈ ನಂಜೇಗೌಡ ಹೇಳಿದರು.
ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿನ ಆರೋಗ್ಯ ಕೇಂದ್ರ ಆವರಣ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಮಾಸ್ತಿ ಮುಖ್ಯ ರಸ್ತೆಯಲ್ಲಿ ವೋಲ್ವೋ ಕಂಪನಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿರುವ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಲೂರು ತಾಲ್ಲೂಕು ಹಿಂದುಳಿದ ಪ್ರದೇಶವಾಗಿದ್ದು, ಸರ್ಕಾರವೇ ಎಲ್ಲಾ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗುವುದಿಲ್ಲ, ವೋಲ್ವೋ ಅಂತಹ ದೊಡ್ಡ ಕಂಪನಿಗಳು ತಾಲೂಕಿನಲ್ಲಿ ಹೈಮಾಸ್ ದೀಪಗಳು, ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ತಾಲೂಕಿನಲ್ಲಿ ವೋಲ್ವೋ ಕಂಪನಿಯಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವಂತೆ ಕಂಪನಿ ಮುಖ್ಯಸ್ಥರಲ್ಲ್ಲಿ ಮನವಿ ಮಾಡಿದರು.
ವೋಲ್ವೋ ಕಂಪನಿ ಅಧಿಕಾರಿ ದಿನಕರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಬನಹಳ್ಳಿ ಸತೀಶ್, ಮುರುಗೇಶ್ ವೈದ್ಯ ಪ್ರಕಾಶ್, ವಾಟರ್ ಪ್ಲಾಂಟ್ ನಿರ್ಮಾಣ ಗುತ್ತಿಗೆದಾರ ಮಂಜುನಾಥ್, ಯುವ ಮುಖಂಡ ಅರುಣ್ ಕುಮಾರ್, ಪಿಡಿಓ ಶಾಲಿನಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.