ಬೆಂಗಳೂರು, ಡಿ. 07: ರಾಜ್ಯದಲ್ಲಿ ಉಪ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಬೆಟ್ಟಿಂಗ್ ಭರಾಟೆಯೂ ಜೋರಾಗಿದ್ದು, ನೆಚ್ಚಿನ ಅಭ್ಯರ್ಥಿಗಳನ್ನು ನಂಬಿ ‘ಬೆಟ್ಟಿಂಗ್ ದೊರೆಗಳು’ ಕುರಿ, ಈರುಳ್ಳಿ ಜತೆಗೆ ಲಕ್ಷಗಟ್ಟಲೆ ಹಣ ಪಣಕ್ಕಿಡುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ಕೆಲವು ದಿನಗಳಿಂದ ಈರುಳ್ಳಿಯ ದರ ಏರಿಕೆ ಕಂಡಿರುವುದರಿಂದ ಅಖಾಡದಲ್ಲಿ ಈರುಳ್ಳಿಯೂ ಕಮಾಲ್ ಮಾಡುತ್ತಿದೆ. ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಅವರು ಗೆಲುವು ಶತಸಿದ್ಧ ಎಂದು ಬೆಂಬಲಿಗರು 5 ಕ್ವಿಂಟಾಲ್ ಈರುಳ್ಳಿ ಬೆಟ್ಟಿಂಗ್ ಕಟ್ಟಿದ್ದಾರೆ. ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಹೆಚ್ಚಿರುವುದರಿಂದ ಶಿವರಾಮ ಹೆಬ್ಬಾರ ಅವರ ಹೆಸರಿನಲ್ಲಿ ಭಾರಿ ಹಣ ಹೂಡಿಕೆಯಾಗಿದೆ.