ನರಗುಂದ : ಕೋವಿಡ್ನಿಂದ ಅನೇಕ ಇಲಾಖೆಗಳಲ್ಲಿ ಪ್ರಗತಿ ಕಾಮಗಾರಿಗಳು ಕೊಂಠಿತಗೊಂಡಿದ್ದು, ಇನ್ನು ಮುಂದೆ ಎಲ್ಲ ಇಲಾಖೆಗಳು ಸಮರ್ಪಕ ಕಾರ್ಯ ನಿರ್ವಹಿಸಿ ಇಲಾಖೆಗಳಿಗೆ ಬಿಡುಗಡೆಗೊಂಡ ಅನುದಾನ ಸಮರ್ಪಕ ರೀತಿಯಲ್ಲಿ ಬಳಸಿ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗುವಂತೆ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಅಧಿಕಾರಿಗಳಿಗೆ ಸೂಚಿಸಿದರು.
ನರಗುಂದ ತಾಪಂ ದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ಗ್ರಾಮೀಣ ಮಟ್ಟದಲ್ಲಿ ನೀರಿನ ಕೊರತೆ ಮತ್ತು ಗ್ರಾಮಕ್ಕೆ ಸಾಗುವ ಮುಖ್ಯ ರಸ್ತೆಗಳನ್ನು ಸಮರ್ಪಕ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಲು ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸಭೆಯಲ್ಲಿ ಇಲಾಖೆ ಪ್ರಗತಿ ವಿವರ ನೀಡಿ, ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 21 ಸಾವಿರ ಹೆಕ್ಟೆರ್ ಬಿತ್ತನೆಗೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಳೆಯಾಗಿದೆ. ಜಮೀನುಗಳಲ್ಲಿನ ತಗ್ಗು ಪ್ರದೇಶದಲ್ಲಿ ನೀರನ್ನು ಹೊರಹಾಕಲು ಈಗಾಗಲೇ ರೈತರಿಗೆ ತಿಳಿಸಿ ಇದಕ್ಕಾಗಿ ಆಲ್ ಎಂಬ ಔಷಧಿ ದೊರೆಯುತ್ತಿದ್ದು ಅದನ್ನು ಬೆಳೆಗಳಿಗೆ ಸಿಂಪಡಿಸಿ ತೇವಾಂಶ ಹಾಗು ಕೆಂಪು ವರ್ಣ ಬೆಳೆಗೆ ಬಾರದಿರಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.