ಉಡುಪಿ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಮೀನುಗಾರಿಕೆ ತೆರಳಿ ಬೋಟ್ ಸಮೇತ ಕಣ್ಮರೆಯಾದ ಮೀನುಗಾರರ ಮನೆಗಳಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾಸೀತಾರಾಮನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಅವರ ಜೊತೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿರುವ ನಾಪತ್ತೆಯಾದ ಮೀನುಗಾರರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಯೋಗಕ್ಷೇಮ ವಿಚಾರಿಸಿ ಅವರ ಕಣ್ಣೀರು ನೋಡಿ ಭಾವುಕರಾದರು.
ಕಳೆದ ಡಿಸೆಂಬರ್ನಲ್ಲಿ ಮೀನುಗಾರಿಕೆಗೆ ತೆರಳಿದ್ದವರು ಬೋಟ್ ಸಮೇತ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಅವರ ಹುಡುಕಾಟ ನಿರಂತರವಾಗಿ ನಡೆಯುತ್ತಲೇ ಇದ್ದು, ಆದರೆ ಕುಟುಂಬ ಸದಸ್ಯರು ಅವರು ಎಲ್ಲೋ ಒಂದುಕಡೆ ನಮ್ಮವರು ಬದುಕಿ ಬರುತ್ತಾರೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇಂದು,ನಾಳೆ ಬರುತ್ತಾರೆ ಎಂಬ ಆಶಾ ಭಾವನೆಯೊಂದಿಗೆ ದಿನದೂಡುತ್ತಿದ್ದಾರೆ.
ಕಾಣೆಯಾದ ಚಂದ್ರಶೇಖರ್, ದಾಮೋದರ್ ಅವರ ಮನೆಗೆ ಭೇಟಿ ನೀಡಿದಾಗ ಅವರ ಪತ್ನಿಯರ ಆಕ್ರಂದನ ನೋಡಿ ಸಚಿವರ ಮನ ಮಿಡಿಯಿತು. ಕೊನೆಗೆ ದುಃಖದಲ್ಲಿದ್ದವರನ್ನು ಸಮಾಧಾನ ಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ನಿಮಗೆ ಒಪ್ಪಿಸುತ್ತೇವೆ ಎಂದು ಭರವಸೆ ನೀಡಿದರು.