ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಬೆಂಗಳೂರು

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಬೆಂಗಳೂರು

ಬೆಂಗಳೂರು, ಸೆ. 21: ವೇಗವಾಗಿ ಬೆಳೆಯುತ್ತಿರುವ ರಾಜ್ಯದ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಒಂದನೇ ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537 ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಕೆಂಪೇಗೌಡರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕುಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು.

54 ಪೇಟೆಗಳ ನಿರ್ಮಾಣ

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಐಟಿ ಬಿಟಿ ಕಂಪನಿಗಳ ತವರೆನಿಸಿಕೊಂಡಿದೆ. ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು. ವೃತ್ತಿಯ ಹೆಸರಿನಲ್ಲಿ 54 ಪೇಟೆಗಳು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ, ಹಳೇತರುಗುಪೇಟೆ, ಹೊಸತರುಗುಪೇಟೆ, ಸುಣಕಲ್ಪೇಟೆ, ಕುರುಬರಪೇಟೆ, ಕುಂಚಟಿಗರ ಪೇಟೆ, ಮುತ್ಯಾಲಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಹತ್ತಿಪೇಟೆ, ತಾರಾಮಂಡಲಪೇಟೆ, ದರ್ಜಿಪೇಟೆ, ಕಲಾರಪೇಟೆ, ಮೇದಾರಪೇಟೆ, ಹಳೆ ಪಟ್ನೂಲು ಪೇಟೆಗಳು ನಗರದ ಜೀವನಾಡಿಯಾಗಿದ್ದವು. ದೊಡ್ಡ ಪೇಟೆ ರಾಜಕಾರಣಕ್ಕೆ, ಚಿಕ್ಕಪೇಟೆ ವ್ಯಾಪಾರಕ್ಕೆ ಸೀಮಿತವಾಗಿತ್ತು. ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು.

ಕೆರೆಗಳ ಕೊಡುಗೆ

ಬೆಂಗಳೂರಿಗೆ ನದಿ ಮೂಲಗಳಿರಲಿಲ್ಲ. ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿ

ಗಳನ್ನು ನಿರ್ಮಿಸಿದ್ದರು. ಅವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ. ಹಲವು ಕೆರೆಗಳು ಅಭಿವೃದ್ಧಿ ಹೆಸರಿನಲ್ಲಿ ಹೇಳ ಹೆಸರಿಲ್ಲದಂತಾಗಿವೆ. ಸಂಪಂಗಿ ಕೆರೆ ಜಾಗದಲ್ಲಿ ಕಂಠೀರವ ಕ್ರೀಡಾಂಗಣ, ಸಿದ್ಧಿಕಟ್ಟೆ ಇದ್ದ ಸ್ಥಳದಲ್ಲಿ ಕೆ.ಆರ್.ಮಾರುಕಟ್ಟೆ, ಧರ್ಮಾಂಬುಧಿ ಕೆರೆ ಜಾಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣವಾಗಿದೆ. ನಗರೀಕರಣದ ಪರಿಣಾಮ, ಹಲವು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ.

ಕೆಂಪೇಗೌಡರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದರು. ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿ, ದೇವರ ಮೇಲಿದ್ದ ಭಕ್ತಿಯನ್ನು ತೋರ್ಪಡಿಸಿದ್ದರು.

ಕೆಂಪೇಗೌಡ ಸ್ಮರಣೆ

ಕೆಂಪೇಗೌಡರ ವಿವೇಚನಾಯುತ ಯೋಜನೆಗೆ ಮತ್ತು ಕತೃತ್ವಶಕ್ತಿಯುಳ್ಳ ವ್ಯಕ್ತಿತ್ವಕ್ಕೆ 481 ವರ್ಷಗಳ ಬಳಿಕವೂ ಜನತೆ ಋುಣಪೂರ್ವಕವಾಗಿ ನೆನೆಯುತ್ತಲೇ ಇದ್ದಾರೆ. ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತಿ ದೊಡ್ಡ ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಅಲ್ಲದೇ ನಗರದೆಲ್ಲೆಡೆ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ

ಕೆಂಪೇಗೌಡರ ವಂಶವೃಕ್ಷ

ಮಾಗಡಿ ಕೆಂಪೇಗೌಡ, ಯಲಹಂಕ ಕೆಂಪೇಗೌಡ, ನಾಡಪ್ರಭು ಕೆಂಪೇಗೌಡರು ಬೇರೆ ಬೇರೆಯೇ, ಎಲ್ಲರೂ ಒಬ್ಬರೇ, ಎನ್ನುವ ಪ್ರಶ್ನೆಗಳು ಈಗಲೂ ಇವೆ. ಅದಕ್ಕೆ ಉತ್ತರ ಹೀಗಿದೆ. ಯಲಹಂಕದ ಮೂಲಪುರುಷ ರಣಭೈರೇಗೌಡರ ಹಿರಿಯ ಮಗ ಜಯಗೌಡ ಎನ್ನಲಾಗುತ್ತಿದೆ. ಕ್ರಿ.ಶ.1420 ರಲ್ಲಿ ಅಧಿಕಾರಕ್ಕೇರಿದ್ದರು. ಸಂಸ್ಥಾನ ವಿಸ್ತರಿಸಿ 13 ವರ್ಷ ಕಾಲ ಆಡಳಿತ ನಡೆಸಿ 1433ರಲ್ಲಿ ಮೃತಪಟ್ಟಿದ್ದರು.

ಅವರಿಗೆ ಇಬ್ಬರು ಮಕ್ಕಳು. ಗಿಡ್ಡೆಗೌಡ ಮತ್ತು ಮಾಚಯ್ಯಗೌಡ. ಹಿರಿಯನಾದ ಗಿಡ್ಡೆಗೌಡ, ತಂದೆಯ ನಂತರ ಗದ್ದುಗೆಗೇರಿದ್ದರು. ಮನೆದೇವರು ಕರಗದಮ್ಮನಿಗೆ (ಕೆಂಪಮ್ಮ)ಹರಕೆ ಹೊತ್ತಿದ್ದರಿಂದ ಹಲವು ವರ್ಷಗಳ ನಂತರ ಅವರಿಗೆ ಗಂಡು ಸಂತಾನ ಆಯಿತು ಎಂದು ಹೇಳಲಾಗುತ್ತಿದೆ. ಹರಕೆಯಂತೆ ಆ ಮಗುವಿಗೆ ಕೆಂಪನಂಜೇಗೌಡ ಎಂದು ನಾಮಕರಣ ಮಾಡಲಾಗಿತ್ತು. ಗಿಡ್ಡೆಗೌಡ 10 ವರ್ಷ ಕಾಲ ಆಡಳಿತ ನಡೆಸಿ 1443 ರಲ್ಲಿ ಮರಣ ಹೊಂದಿದ್ದರು. ನಂತರ ಕೆಂಪನಂಜೇಗೌಡ ಅಧಿಕಾರಕ್ಕೆ ಬಂದು ಕ್ರಿ.ಶ. 1513 ರವರೆಗೆ ಸತತ 70 ವರ್ಷಗಳ ಕಾಲ ಯಲಹಂಕವನ್ನು ಆಳಿದ್ದರು. ಅವರ ಹಿರಿಯ ಪುತ್ರನೇ ‘ನಾಡಪ್ರಭು ಕೆಂಪೇಗೌಡ’. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಆರಂಭಗೊಳ್ಳಬೇಕಿದೆ

ನಾಡಪ್ರಭು ಕೆಂಪೇಗೌಡರ ಅಧ್ಯಯನ ಹಾಗೂ ಸಂಶೋಧನೆ ಮತ್ತಿತರ ಸಂಗತಿಗಳಿಗೆ ಪೂರಕವಾಗಿ ಸರಕಾರ ಆರಂಭಿಸಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಂಪೇಗೌಡ ಭವನ ನಿರ್ಮಾಣ ಕಾರ್ಯ ಚಟುವಟಿಕೆಗಳು ಆರಂಭವಾಗಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos