ಮೋದಿಯಿಂದ ಮಲ್ಯ, ನೀರವ್ ಮೋದಿ, ಅಂಬಾನಿಗೆ ಮಾತ್ರ ವಿಕಾಸ: ಸಿದ್ದರಾಮಯ್ಯ

ಮೋದಿಯಿಂದ ಮಲ್ಯ, ನೀರವ್ ಮೋದಿ, ಅಂಬಾನಿಗೆ ಮಾತ್ರ ವಿಕಾಸ: ಸಿದ್ದರಾಮಯ್ಯ

ಹಾವೇರಿ, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಮೋದಿ ಯಾವ ಸಮಾವೇಶದಲ್ಲಿಯೂ ಕೇಂದ್ರ ಸರ್ಕಾರದ 5 ವರ್ಷದ ಸಾಧನೆಗಳ ಬಗ್ಗೆ ಮಾತನಾಡಲ್ಲ. ಕೇವಲ ದೇಶ ಭಕ್ತಿ, ರಾಮಮಂದಿರದಂತಹ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಇಂದು ನಗರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶ ಭಕ್ತಿ, ರಾಮಮಂದಿರ ಸೇರಿದಂತೆ ವಿಚಾರಗಳ ಬಗ್ಗೆ ಮಾತನಾಡುವ ಒಳ್ಳೆಯ ಕಲೆಯನ್ನು ಮೋದಿ ಅಳವಡಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಬಗ್ಗೆ ಹುಬ್ಬಳ್ಳಿ, ಕಲಬುರಗಿಯಲ್ಲಿ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಲಿಲ್ಲ ಎಂದು ಕಿಡಿ ಕಾರಿದರು.

ಸರ್ಕಾರ ರಚನೆಗೂ ಮುನ್ನವೇ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಮಾತು ನೀಡಿದ್ದರು. ಆದ್ರೆ ನೀರವ್ ಮೋದಿ, ಮಲ್ಯ, ಅಂಬಾನಿಯವರ ವಿಕಾಸ ಆಗುತ್ತಿದೆ. ರೈತರ ಸಾಲಮನ್ನಾ ಮಾಡಿ ಎಂದು ಕೇಳಿದ್ರೆ. ಅದರ ಬಗ್ಗೆ ಮಾತನಾಡಲ್ಲ. ಚುನಾವಣೆ ಸಮೀಪ ಬರುತ್ತಿದ್ದಂತೆ ರೈತರ ಖಾತೆಗೆ 2 ಸಾವಿರ ರೂ. ಹಾಕಲು ಮುಂದಾಗಿದ್ದಾರೆ ಎಂದು ಮೋದಿಯನ್ನು ಟೀಕಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಯಡಿಯೂರಪ್ಪನವರು ಮಾತು ಎತ್ತಿದ್ರೆ ನಾನು ರೈತರ ಮಗ ಎಂದು ಹೇಳಿ, ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇದೇ ಹಾವೇರಿಯಲ್ಲಿ ಗೊಬ್ಬರ ಕೇಳಿದ ಇಬ್ಬರು ರೈತರನ್ನು ಗುಂಡಿಟ್ಟು ಕೊಂದರು. ಸದ್ಯ ಮೈತ್ರಿ ಸರ್ಕಾರ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಾಲಮನ್ನಾ ಮಾಡಲು ನಮ್ಮ ದುಡ್ಡು ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದು ಹೇಳಿದ್ದನ್ನು ನೀವು ನೆನಪಿಸಿಕೊಳ್ಳಬೇಕು ಎಂದು ಯಡಿಯೂರಪ್ಪರನ್ನೂ ಟೀಕಿಸಿದರು.

ಹಾವೇರಿಯಲ್ಲಿ ಸ್ಪರ್ಧೆ ಮಾಡುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಬೇಕು. ರಾಹುಲ್ ಗಾಂಧಿ ಅವರು ಪ್ರಧಾನಿಯಾದ್ರೆ ದೇಶದ ಎಲ್ಲ ರೈತರ ಸಾಲಮನ್ನಾ ಮಾಡುವ ಚಿಂತನೆಯಲ್ಲಿದ್ದಾರೆ. ಪ್ರಧಾನಿಗಳು ಕೇವಲ ಭಾವನಾತ್ಮಕ ವಿಚಾರಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos