ಕುಣಿಗಲ್:ಟೀ ಮಾರುತ್ತಾ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ, ತನಗಿದ್ದ ಎರಡು ಎಕರೆ ಜಮೀನಿನಲ್ಲಿಯೇ ಸಾಲ ಸೂಲ ಮಾಡಿ ಬೋರ್ ಕೊರೆಸಿ ನೀರು ಬಿದ್ದಿದ್ದರಿಂದ, ೭೦೦ ಅಡಿಕೆ ಸಸಿ, ೨೦೦ ತೆಂಗಿನ ಸಸಿ ನೆಟ್ಟಿದ್ದ. ಕೆಲ ವರ್ಷಗಳು ಕಳೆದಿದ್ದರೇ ನೆಟ್ಟ ಸಸಿಗಳು ಫಲಕೊಡುತ್ತಿದ್ದವು. ಆದ್ರೇ ಕೇವಲ ೨೦ ಗುಂಟೆ ಜಮೀನು ವಿಚಾರಕ್ಕೆ ಉಂಟಾದ ವೈಮನಸ್ಸಿನಿಂದಾಗಿ ರಾತ್ರೋ ರಾತ್ರಿ ದುಷ್ಕರ್ಮಿಗಳು ಅಡಿಕೆ, ತೆಂಗು ಗಿಡಗಳನ್ನೇ ಕಡಿದು ಹಾಕಿ, ದುಷ್ಕೃತ್ಯ ಮೆರೆದಿರುವ ಘಟನೆ ಕುಣಿಗಲ್ನಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಹೇರೂರು ಗ್ರಾಮದ ನಾಗರಾಜು ಎಂಬುವರು ೨ ಎಕರೆ ಜಮೀನು ಹೊಂದಿದ್ದರು. ಜಮೀನಿನಲ್ಲಿ ಬೆಳೆ ಏನೂ ಬಾರದ ಕಾರಣ ಟೀ ಅಂಗಡಿ ಇಟ್ಟುಕೊಂಡು ಅದರಿಂದ ಜೀವನ ನಡೆಸುತ್ತಾ ಇದ್ರು. ಇದರ ನಡುವೆ ಇತ್ತೀಚೆಗೆ ಸಾಲ ಮಾಡಿ ಜಮೀನಿನಲ್ಲಿ ಬೋರ್ ಕೊರೋಸಿದ್ದರು. ನೀರು ಸಹ ಬಿದ್ದಿತ್ತು. ಇದೇ ಖುಷಿಯಲ್ಲಿ ನಾಗರಾಜು ಅವರು ೭೦೦ ಅಡಿಕೆ ಸಸಿ, ೨೦೦ ತೆಂಗಿನ ಸಸಿ ನಟ್ಟಿದ್ದರು. ನೆಟ್ಟ ಸಸಿಗಳು ರೈತ ನಾಗರಾಜು ನಿರೀಕ್ಷೆಯಂತೆ ಬೆಳೆದು ದೊಡ್ಡವಾಗಿದ್ದರೇ ಐದಾರು ವರ್ಷಗಳಲ್ಲಿ ಫಸಲು ಕೊಡುತ್ತಿದ್ದವು. ಆದ್ರೇ ರಾತ್ರೋ ರಾತ್ರಿ ದುಷ್ಕರ್ಮಿಗಳು ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ.
ಹೀಗೆ ದುಷ್ಕರ್ಮಿಗಳು ನೆಟ್ಟ ಸಸಿಗಳನ್ನು ಕತ್ತರಿ ಹಾಕಿರುವುದನ್ನು ಕಂಡ ರೈತ ನಾಗರಾಜು ಕಣ್ಣೀರು ಹಾಕಿದ್ದಾನೆ. ಇದಕ್ಕೆ ಕಾರಣ ಯಾರು ಎಂದು ತಿಳಿದು ಬಂದಿಲ್ಲವಾದರೂ, ಚಿಕ್ಕಪ್ಪನ ಮಗ ೨೦ ಗುಂಟೆ ಜಮೀನಿನ ವಿಚಾರಕ್ಕಾಗಿ ಆಗಾಗ ಜಗಳ ಮಾಡುತ್ತಿದ್ದ, ಆತನೇ ಮಾಡಿಸಿರಬಹುದು ಎಂಬುದಾಗಿ ಸಂಶಯ ವ್ಯಕ್ತವಾಗಿದೆ. ಏನೇ ಆದ್ರೂ ಮರಗಳನ್ನು ಕಡಿಯುವುದು ಒಂದೇ, ಮಕ್ಕಳನ್ನು ಕಡಿಯುವುದು ಒಂದೇ. ಇಂತಹ ದುಷ್ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿ ಎಂಬುದು ನಾಗರಾಜ್ ಅಳಲಾಗಿದೆ.