ಉತ್ತರಕನ್ನಡ, ಕಾರವಾರ: ಕೂರ್ಮಗಡ ದ್ವೀಪ ಪ್ರದೇಶದಲ್ಲಿ ಜಾತ್ರೆಯಿಂದ ಜನರನ್ನ ವಾಪಸ್ ಕರೆತರುತ್ತಿದ್ದ ಬೋಟ್ವೊಂದು ಮುಳುಗಿ ಭಾರಿ ಅನಾಹುತ ಸಂಭವಿಸಿದೆ. ಅಪಘಾತದಲ್ಲಿ 8 ಮಂದಿ ಜಲಸಮಾಧಿ ಆಗಿದ್ದಾರೆ.
ಬೋಟ್ ಮುಳುಗಡೆಯಾಗಿದ್ದರಿಂದ ಒಟ್ಟು 8 ಜನರು ಸಾವನ್ನಪ್ಪಿದ್ದು, ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಕಾರವಾರ ಮೂಲದ ಸುರೇಶ್, ಆದರ್ಶ, ಶ್ರೀನಿವಾಸ, ಚೇತನಕುಮಾರ ಮೃತಪಟ್ಟವರು. ಇನ್ನುಳಿದವರ ಹೆಸರು ತಿಳಿದು ಬಂದಿಲ್ಲ. ಅರಬ್ಬೀ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಒಟ್ಟು 25 ಕ್ಕೂ ಹೆಚ್ಚು ಜನರು ಬೋಟ್ನಲ್ಲಿ ಪ್ರಯಾಣಿಸುತ್ತಿದ್ದರು. ಕಾರವಾರದಲ್ಲಿ ನೆಲೆಸಿರುವ ಕೊಪ್ಪಳ ಮೂಲದ ಒಂದೇ ಕುಟುಂಬದ 12 ಜನರು ಬೋಟನಲ್ಲಿದ್ದರು ಎನ್ನಲಾಗಿದೆ. 25 ಜನರಲ್ಲಿ 12 ಮಂದಿಯ ಲೆಕ್ಕ ಸಿಕ್ಕಿದ್ದು, ಇನ್ನುಳಿದ 13 ಪ್ರಯಾಣಿಕರು ಸಹ ನಾಪತ್ತೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಅಲೆಗಳ ಅಬ್ಬರಕ್ಕೆ ಬೋಟ್ ಮಗುಚಿ ಈ ಅವಘಡ ನಡೆದಿದೆ ಎಂದು ಹೇಳಲಾಗ್ತಿದೆ. ಈಗಾಗಲೇ ಕರಾವಳಿ ಕಾವಲು ಪಡೆ ಹಾಗೂ ಮೀನುಗಾರರು ಬೋಟ್ ಮೂಲಕ ನಾಪತ್ತೆಯಾದವರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಸ್ಥಳಕ್ಕೆ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಭೇಟಿ ನೀಡಿದ್ದಾರೆ.