ಕೊರಟಗೆರೆ: ಜೆಡಿಎಸ್ ಪಕ್ಷ ಕೊರಟಗೆರೆ ಕ್ಷೇತ್ರದ ಭದ್ರಕೋಟೆ ಎಂಬುದಕ್ಕೆ 6ಹೋಬಳಿಯ 36ಗ್ರಾಪಂಗಳಲ್ಲಿ ಶೇ.70ರಷ್ಟು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದೇ ಸಾಕ್ಷಿ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಕೊರಟಗೆರೆ ವಿಧಾನಸಭಾಕ್ಷೇತ್ರದ 6 ಹೋಬಳಿಯ 36ಗ್ರಾಪಂ ವ್ಯಾಪ್ತಿಯ 408ಕ್ಕೂ ಅಧಿಕ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಮಾಜಿ ಪ್ರಧಾನಿ ದೇವೆಗೌಡ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಆರ್ಶಿವಾದದ ಜೊತೆ ಕೊರಟಗೆರೆ ಕ್ಷೇತ್ರದ ಜಿಪಂ, ತಾಪಂ ಮತ್ತು ಗ್ರಾಪಂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಸದೃಢವಾಗಿದೆ. ಮತದಾರ ಪ್ರಭು ನೀಡಿದ ಗ್ರಾಪಂ ಅಧಿಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ನೂತನ ಸದಸ್ಯರಿಗೆ ಸೂಚನೆ ನೀಡಿದರು.