ಕೋಲಾರ: ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿಕೊಡುವ ಮೂಲಕ ಎಲ್ಲಾ ರಂಗಗಳಲ್ಲೂ ತನ್ನದೇ ಛಾಪು ಮೂಡಿಸುತ್ತಿದ್ದಾಳೆ ಎಂದು ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಕುಲ ಪೀಠದ ಶ್ರೀಗಳಾದ ಶ್ರೀ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿಗಳ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳ್ಳೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿದ್ದ ಕೋಲಾರ ಜಿಲ್ಲಾ ಮಹಿಳಾ ವಾಲ್ಮೀಕಿ ಸಂಘಗಳ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗಾಗಿ ಇರುವ ಯೋಜನೆಗಳು, ಪ್ರೋತ್ಸಾಹಧನ, ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯಾರಿಗೂ ಭಾರವಾಗದೆ ತನ್ನ ಜೀವನವನ್ನು ಕಟ್ಟಿಕೊಳ್ಳತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಮಹಿಳೆಯರು ಇನ್ನಷ್ಟು ಉನ್ನತ ಸ್ಥಾನವನ್ನು ತಲುಪಲಿ ಎಂದು ಆಶೀರ್ವದಿಸಿದರು.
ವಾಲ್ಮೀಕಿ ಸಂಘದ ನರಸಿಂಹಯ್ಯ ಮಾತನಾಡಿ, ಮಹಿಳೆ ಸ್ವಾಭಿಮಾನಿ, ಸಂಘಗಳನ್ನು ಕಟ್ಟಿಕೊಳ್ಳುವ ಮೂಲಕ ತನ್ನ ಸ್ವಾವಲಂಭಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸೌಲತ್ತುಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ಬರಬೇಕೆಂದು ಆಶಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಶ್ರೀನಿವಾಸ್, ಉಪಾಧ್ಯಕ್ಷೆ ಸುನೀತಾ, ಕರ್ನಾಟಕ ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ಅಧ್ಯಕ್ಷ ವಾಲ್ಮೀಕಿ ಮಾದೇಶ ಶಿವಾನಂದ, ಬೆಳ್ಳೂರು ಆಂಜಿನಪ್ಪ, ವಾಲ್ಮೀಕಿ ಗುರುಕುಲ ಪೀಠದ ಕೋಲಾರ ಜಿಲ್ಲಾ ಶಾಖೆಯ ಅಧ್ಯಕ್ಷ ಶ್ಯಾಮ್ನಾಯಕ್, ರಾಜ್ಯ ವಾಲ್ಮೀಕಿ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್, ನೌಕರರ ಸಂಘದ ಅಧ್ಯಕ್ಷ ಕೆ.ಜಿ.ಡಿ ನಾಗರಾಜ್, ಕೆ.ಎಸ್.ಆರ್.ಟಿ.ಸಿ ಮುನಿಯಪ್ಪ, ಅಂಬೇಡ್ಕರ್ ಸಂಘದ ಗಿರೀಶ್ ಉಪಸ್ಥಿತರಿದ್ದರು.