ಬೆಂಗಳೂರು:ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಕೊರೋನಾ ಹಿನ್ನೆಲೆ ಲಾಕ್ ಡೌನ್ ಆದ ಸಂದರ್ಭದಲ್ಲಿ ಎಲ್ಲಾ ಕಾರ್ಖಾನೆಗಳು ಮುಚ್ಚಿ ಹೋದವು. ಎಷ್ಟೋ ಕಾರ್ಮಿಕರ ಜೀವನ ಮೂರಾಬಟ್ಟೆ ಆಯಿತು. ಬೆಂಗಳೂರು ತೊರೆದು ಎಷ್ಟೋ ಕುಟುಂಬಗಳು ತಮ್ಮ ಹುಟ್ಟೂರಿಗೆ ಪಯಣ ಬೆಳೆಸಿದರು. ಜೀವ ಇದ್ದರೆ ಸಾಕು, ಜೀವನ ಹೇಗೋ ಆಗುತ್ತೆ ಎಂಬ ಭಯದ ವಾತಾವರಣ ಮನೆಮಾಡಿತ್ತು.
ಮತ್ತೆ ಗಾರ್ಮೆಂಟ್ಸ್ ಕಾರ್ಖಾನೆಗಳು ಪ್ರಾರಂಭಗೊಳ್ಳುತ್ತಿದ್ದು, ಇಂದು ಪ್ರತಿಷ್ಠಿತ ಜಾಕಿ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಶಾಸಕ ಸತೀಶ್ ರೆಡ್ಡಿಯವರು ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ಕೊರೋನಾಗೆ ಯಾರು ಹೆದರುವ ಅವಶ್ಯಕತೆಯಿಲ್ಲಾ. “ನಿಮ್ಮೊಂದಿಗೆ ನಾನಿದ್ದೇನೆ” ಎಂಬ ಭರವಸೆ ನೀಡಿದರು. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸುಮಾರು ೧೦೦ಕ್ಕೂ ಅಧಿಕ ಆಂಬ್ಯುಲೆನ್ಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ಕೊರೋನಾ ಪರೀಕ್ಷೆ ಮಾಡುತ್ತೇವೆ. ಹಲವಾರು ಸ್ವಯಂ ಸೇವಕರು ಕೊರೋನಾ ವಾರಿರ್ರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಹೆದರುವ ಅವಶ್ಯಕತೆ ಇಲ್ಲಾ ಎಂದು ನುಡಿದರು.
ನಂತರ ಮಾತನಾಡಿದ ಜಂಟಿ ಆಯುಕ್ತ ರಾಮಕೃಷ್ಣ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಪ್ರತಿ ದಿನ ೫೦೦೦ಕ್ಕೂ ಹೆಚ್ಚು ಕೊರೋನಾ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಸುಮಾರು ೧ ಲಕ್ಷಕ್ಕೂ ಅಧಿಕ ಗಾರ್ಮೆಂಟ್ಸ್ ನೌಕರರಿದ್ದು, ಗಾಮೆಂಟ್ಸ್ ಮಾಲೀಕರ ಜೊತೆ ಮಾತನಾಡಿ, ಅವರಿಗೆ ಉಚಿತ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ ಎಂದು ನುಡಿದರು. ಇದೀಗ ಕೊರೋನಾ ಮಧ್ಯೆ ಜೀವನ ಸಾಗಿಸುವ ಅನಿವರ್ಯತೆ ಇದ್ದು, ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೇ ಸಾಕೆಂದರು.