ರಾಜಧಾನಿಯಲ್ಲಿ ವೈಭವದ ಹುಸ್ಕೂರು ಮದ್ದೂರಮ್ಮ ಜಾತ್ರೆ…

ರಾಜಧಾನಿಯಲ್ಲಿ ವೈಭವದ ಹುಸ್ಕೂರು ಮದ್ದೂರಮ್ಮ ಜಾತ್ರೆ…

ಬೆಂಗಳೂರು, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಜಾತ್ರೆ ಅಂದ್ರೆ ಸಹಜವಾಗಿ ತೇರು, ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯ ಇತ್ಯಾದಿಗಳಿಂದ ಕಂಗೊಳಿಸುತ್ತವೆ. ಗ್ರಾಮೀಣ ಭಾಗದಲ್ಲಂತೂ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸಿ ನೆಂಟರಿಷ್ಟರ ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿನ ಮದ್ದೂರಮ್ಮ ಜಾತ್ರೆ ಕೋಮು ಸಾಮರಸ್ಯವನ್ನ ಗಟ್ಟಿಗೊಳಿಸೋ ಐತಿಹಾಸಿಕ ಸತ್ಯವೊಂದನ್ನ ಹೇಳುತ್ತಲೇ ಸಾಂಸ್ಕೃತಿಕ ಆಚರಣೆಗೆ ಸಾಕ್ಷಿಯಾಗುತ್ತಲೇ ಬಂದಿದೆ. 350 ವರ್ಷಗಳ ಇತಿಹಾಸವಿರುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಆನೇಕಲ್ ಸುತ್ತಮುತ್ತಲ ಹಳ್ಳಿಗಳಲ್ಲಿ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾಗಿದೆ. ತೇರುಗಳು ತಾವು ನಡೆದದ್ದೇ ದಾರಿಯೆಂಬತೆ ಸಾಗುತ್ತವೆ. ಇವು ಸಾಗುವ ದಾರಿಯಲ್ಲಿ ಕರೆಂಟ್​ ವೈರ್​​​ ಅಡ್ಡ ಬಂದರೆ ಅವನ್ನು ಕ್ಷಣದಲ್ಲೇ ಕಟ್ ಮಾಡಲಾಗುತ್ತದೆ. ಎತ್ತುಗಳ ಜೊತೆ 2 ಟ್ರ್ಯಾಕ್ಟರ್​ ಹಾಗೂ 1 ಜೆಸಿಬಿ ತೇರುಗಳು ನಿಗದಿತ ಸ್ಥಳ ಸೇರುವವರೆಗೂ ಶ್ರಮಿಸುತ್ತಿರುತ್ತವೆ. ಇನ್ನು ಇದೇ ರೀತಿಯ 10 ತೇರುಗಳು ಮದ್ದೂರಮ್ಮ ದೇವಾಲಯದ ಬಳಿ ಆಗಮಿಸುತ್ತವೆ.

ಇಡೀ ಕರ್ನಾಟಕದಲ್ಲೇ ಈ ರೀತಿಯ ಆಚರಣೆ ಬೇರೆ ಎಲ್ಲೂ ಕಾಣಲು ಸಿಗುವುದಿಲ್ಲ. ಈ ಜಾತ್ರೆಯ ಮತ್ತೊಂದು ವೈಶಿಷ್ಟವೆಂದರೆ ತೇರುಗಳು. 12 ಹಳ್ಳಿಗಳಿಂದ 150 ರಿಂದ 200 ಅಡಿ ಉದ್ದದ 10ಕ್ಕೂ ಹೆಚ್ಚು ರಂಗು ರಂಗಿನ ತೇರುಗಳನ್ನ 15 ಕೀ.ಮೀ. ದೂರದಿಂದ ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತದೆ. ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳನ್ನ ನಿರ್ಮಿಸುತ್ತಾರೆ. ಎಷ್ಟು ಎತ್ತರ, ಯಾವ ಗ್ರಾಮದ ತೇರು ಎಂಬುದು ಪ್ರತಿಷ್ಠೆಯಾಗಿಸಿಕೊಳ್ಳುವ ಸ್ಪರ್ಧೆಗೆ ಹುಸ್ಕೂರು ಜಾತ್ರೆ ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತು. ಕೇರಳ ಮತ್ತು ತಮಿಳುನಾಡಿನ ಕಡೆಯಿಂದ ಟಿಪ್ಪ ಸುಲ್ತಾನ್ ಸಾಮ್ರಾಜ್ಯ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಆನೇಕಲ್ ಮಾರ್ಗದ ಹುಸ್ಕೂರು ಬಯಲಿನ ಮದ್ದೂರಮ್ಮ ದೇವಾಲಯದಲ್ಲಿ ರಾತ್ರಿಪೂರಾ ನಿತ್ರಾಣವಾಗಿ ಬೀಡುಬಿಟ್ಟಿದ್ದರೆಂದು ಐತಿಹ್ಯಗಳು ತಿಳಿಸುತ್ತವೆ. ನಂತರ ಬೆಳಗ್ಗೆ ಎದ್ದಾಗ ಚೈತನ್ಯದಿಂದ ಕೂಡಿದ ನವೋಲ್ಲಾಸ ಸೈನಿಕರಲ್ಲಿ ಮೂಡಿತ್ತಂತೆ. ಇದೇ ಜ್ಞಾಪಕಾರ್ಥವಾಗಿ ವಜ್ರಖಚಿತ ಕಿರೀಟದ ಜೊತೆಗೆ ದೇವಿಗೆ ಚಿನ್ನಾಭರಣಗಳನ್ನು ಅರ್ಪಸಿದ್ದ ಎಂದು ಇತಿಹಾಸ ತಿಳಿಸುತ್ತದೆ. ಇಂದಿಗೂ ಜಾತ್ರೆಯ ದಿನ ಆನೇಕಲ್ ಖಜಾನೆಯಲ್ಲಿ ಭದ್ರವಾಗಿರಿಸಿರುವ ವಜ್ರಕಿರೀಟ ಚಿನ್ನಾಭರಣಗಳನ್ನು ದೇವರಿಗೆ ಮುಡಿಸಿ ಅಲಂಕರಿಸಲಾಗುತ್ತಿದೆ. ಕೋಮು ಡಳ್ಳುರಿ ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಪರಧರ್ಮ ಸಹಿಷ್ಣು ಟಿಪ್ಪು ಎಂಬುದು ಗ್ರಾಮಾಂತರದಲ್ಲೂ ಈ ಮೂಲಕ ಸಾಬೀತುಪಡಿಸುವ ಕುರುಹುಗಳು ಕಂಡುಬರುತ್ತವೆ. ಜಾತ್ರೆಯಲ್ಲಿ ಮೊದಲ ದಿನ ತೇರುಗಳನ್ನು ಹಳ್ಳಿಗಳಿಂದ ಹುಸ್ಕೂರಿನ ಮದ್ದೂರಿಮ್ಮನ ಸನ್ನಿಧಿಗೆ ತರಲಾಗುತ್ತದೆ. ಈ ತೇರುಗಳು ಹಳ್ಳಿಗಳ ಪ್ರತಿಷ್ಠೆಯ ವಿಷಯ. ಹಳ್ಳಿಗಳಲ್ಲಿ ಜಾತ್ರೆಯ 1 ತಿಂಗಳ ಮುಂಚಿತವಾಗಿ ಈ ತೇರುಗಳನ್ನು ಸಿದ್ಧಪಡಿಸಲಾಗುತ್ತದೆ. ಜಾತ್ರೆಯ 2 ದಿನ ಇಲ್ಲಿ ಕರಗ ಮಹೋತ್ಸವ ನಡೆಯುತ್ತದೆ. ಐದು ದಿನಗಳ ಕಾಲ ಈ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಇಡೀ ಆನೇಕಲ್ ತಾಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಈ ಮೂಲಕ ಯುಗಾದಿ ಹಬ್ಬಕ್ಕೆ ಇನ್ನಷ್ಟು ಮೆರಗು ತಂದು ಕೊಡುತ್ತದೆ. ಐತಿಹಾಸಿಕ ಟಿಪ್ಪು ಸುಲ್ತಾನ್ ಮತ್ತು ಪುರಾಣದ ಮದೂರಮ್ಮ ಜನಮನದ ಜಾನಪದದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಳ್ಳುವ ಮೂಲಕ ಸಾಂಸ್ಕೃತಿಕವಾಗಿ, ಧರ್ಮಾತೀತವಾಗಿ ಉಳಿಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos