ಜೆಡಿಎಸ್ ಮುನ್ನಡೆಗೆ ಗೌರಿಶಂಕರ್ ತಂತ್ರಗಾರಿಕೆ

ಜೆಡಿಎಸ್ ಮುನ್ನಡೆಗೆ ಗೌರಿಶಂಕರ್ ತಂತ್ರಗಾರಿಕೆ

ತುಮಕೂರು:ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಟೊಂಕ ಕಟ್ಟಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ಈಗಾಗಲೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದು, ಜೆಡಿಎಸ್ ಮುಖಂಡರಿಗೆ ಹೋಬಳಿವಾರು ಉಸ್ತುವಾರಿ ನೀಡಿ, ಜೆಡಿಎಸ್‌ಗೆ ಮುನ್ನಡೆ ನೀಡುವ ಹೊಣೆಗಾರಿಕೆ ನೀಡಿದ್ದಾರೆ.
ಹುಲಿಕುಂಟೆ ಹೋಬಳಿ ಉಸ್ತುವಾರಿ ವಹಿಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಕಳ್ಳಂಬೆಳ್ಳ ಹೋಬಳಿ ಉಸ್ತುವಾರಿ ವಹಿಸಿಕೊಂಡಿರುವ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರ ನೇತೃತ್ವದಲ್ಲಿ ಈಗಾಗಲೇ ಯುವ ಜೆಡಿಎಸ್ ಕಾರ್ಯಕರ್ತರ ಸಂಘಟನೆಯನ್ನು ಮಾಡಲಾಗುತ್ತಿದ್ದು, ಗೌಡಗೆರೆ ಹೋಬಳಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ವಾಸ್ತವ್ಯ ಹೂಡಿದ್ದು, ಗೌರಿಶಂಕರ್ ಅವರು ಈಗಾಗಲೇ ದೊಡ್ಡಾಲದಮರದಲ್ಲಿ ಜೆಡಿಎಸ್ ಪಕ್ಷದ ಕಚೇರಿಯನ್ನು ತೆರೆಯುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, ಉಪಚುನಾವಣೆಯಲ್ಲಿ ಕಳ್ಳಂಬೆಳ್ಳ ಹೋಬಳಿಯಲ್ಲಿ ಅತ್ಯಧಿಕ ಮುನ್ನಡೆಯನ್ನು ಪಕ್ಷಕ್ಕೆ ದೊರಕಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳ್ಳಂಬೆಳ್ಳ ಹೋಬಳಿಯ ಪ್ರಮುಖ ಮುಖಂಡರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರು ತರೂರು, ಬ್ರಹ್ಮಸಂದ್ರ, ಕಳ್ಳಂಬೆಳ್ಳ, ದೊಡ್ಡಾಲದಮರ, ಯತ್ತಪ್ಪನಟ್ಟಿ, ದೊಡ್ಡ ಅಗ್ರಹಾರ, ಶೀಬಿ ಅಗ್ರಹಾರ ಸೇರಿದಂತೆ ಹಲವು ಪ್ರಮುಖ ಗ್ರಾಮಗಳಲ್ಲಿ ಪ್ರಚಾರ ಸಭೆಯನ್ನು ನಡೆಸುವ ಮೂಲಕ ಜೆಡಿಎಸ್ ಪರ ಮತಯಾಚನೆ ಮಾಡಿದ್ದಾರೆ.
ಮುನ್ನಡೆಗೆ ರಣತಂತ್ರ
ಕಳ್ಳಂಬೆಳ್ಳ ಹೋಬಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ ಮುನ್ನಡೆ ನೀಡುವ ನಿಟ್ಟಿನಲ್ಲಿ ಕಳ್ಳಂಬೆಳ್ಳ ಹೋಬಳಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದೊಂದಿಗೆ ದಲಿತ ಮುಖಂಡರೊಂದಿಗೆ ಸಮನ್ವಯ ಸಾಧಿಸಿರುವ ಡಿ.ಸಿ.ಗೌರಿಶಂಕರ್ ಅವರು, ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬೇರೆ ಪಕ್ಷಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos