ಬೆಂಗಳೂರು, ಮೇ. 22, ನ್ಯೂಸ್ ಎಕ್ಸ್ ಪ್ರೆಸ್: ಬೇಸಿಗೆ ಹೆಚ್ಚಗುತ್ತಿದ್ದಂತೆ ಎಲ್ಲಾ ಕಡೆ ನೀರಿನ ತೊಂದರೆ ಉಂಟಾಗುತ್ತಿದೆ. ನೀರಿಗಾಗಿ ಜನರು ದಿನನಿತ್ಯ ಪರದಾಡುತ್ತಿದ್ದಾರೆ. ಹೌದು, ನೀರಿನ ತೊಂದರೆ ಧರ್ಮಸ್ಥಳದಲ್ಲಿಯೂ ಕೂಡ ಉಂಟಾಗಿದೆ. ಧರ್ಮಸ್ಥಳದಲ್ಲಿ ನೀರಿನ ಅಭಾವವುಂಟಾಗಿರುವ ಕುರಿತು ಎಲ್ಲೆಡೆ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನೌಕರರು 6,780 ಲೀಟರ್ ನೀರನ್ನು ಧರ್ಮಸ್ಥಳಕ್ಕೆ ಸರಬರಾಜು ಮಾಡಿದ್ದಾರೆ. 339 ಕ್ಯಾನ್ ಗಳಲ್ಲಿ ತಲಾ 20 ಲೀಟರ್ಗಳಂತೆ 6780 ಲೀಟರ್ ನೀರನ್ನು ತಮ್ಮ ವಾಹನಗಳಲ್ಲಿ ತಂದುಕೊಟ್ಟಿದ್ದಾರೆ. ಅನ್ನಪೂರ್ಣ ಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತರಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ನೀರಿನ ಅಭಾವವಿರುವ ಕುರಿತು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರೊಂದಿಗೆ ಹೆಗ್ಗಡೆಯವರು ಮಾತುಕತೆ ನಡೆಸಿದ್ದರು.ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಇದೆ. ಹೀಗಾಗಿ, ನೇತ್ರಾವತಿ ನದಿಗೆ ಮತ್ತೊಂದು ಚೆಕ್ ಡ್ಯಾಂ ನಿರ್ಮಾಣ ಮಾಡುವ ಅಗತ್ಯ ಇದೆ ಎಂದು ಧರ್ಮಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಸಲಹೆ ನೀಡಿದ್ದಾರೆ.