ಬೆಂಗಳೂರು, ಡಿ. 06: ದರ್ಶನ್ ಅಭಿನಯದ ಪಂಚ ಭಾಷೆಗಳಲ್ಲಿ ತೆರೆ ಕಾಣಲಿರುವ ಮದಕರಿ ನಾಯಕ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯಲ್ಲಿ ಇಂದು ಬೆಳಿಗ್ಗೆ ಚಿತ್ರದ ಮುಹೂರ್ತ ನಡೆದಿದೆ. ಈ ಸಿನಿಮಾದ ಅಸಲಿ ಹೆಸರನ್ನು ಚಿತ್ರತಂಡ ಈಗ ರಿವೀಲ್ ಮಾಡಿದೆ
ಇಂದು ಬೆಳಗ್ಗೆ 5.30ಕ್ಕೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮೂಲಕ ಚಿತ್ರದ ಮುಹೂರ್ತ ನೆರೆವೇರಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ಶ್ರೀನಿವಾಸ್ ಸೇರಿ ಹಲವರು ಭಾಗಿಯಾಗಿದ್ದರು. ‘ಸುಮಲತಾ ಅಮ್ಮ ‘ರಾಜ ವೀರಮದಕರಿ ನಾಯಕ’ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯರು ಅಂದರೆ, ನಮ್ಮ ತಂದೆ ಜೊತೆ ಕೆಲಸ ಮಾಡಿದವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ಕೂತ್ಕೊ ಅಂದ್ರೆ ಕುತ್ಕೊ ನಿಂತ್ಕೊ ಅಂದ್ರೆ ನಿಂತ್ಕೊ ಬೇಕು. ಇದೊಂದು ದೊಡ್ಡ ಟೀಂ. ವಿಶೇಷ ಅಂದ್ರೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮುಹೂರ್ತದ ನಂತರ ಹೇಳಿದ್ದಾರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್.
‘ಇನ್ನು ಚಿತ್ರಕ್ಕೆ ಚಾಲನೆ ನೀಡಿರುವ ಸುಮಲತಾ ತಮ್ಮ ಮಾನಸ ಪುತ್ರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವುದೇ ಖುಷಿ ಸಮಾಚಾರ. ಇದೊಂದು ಹಿಸ್ಟರಿ ಕ್ರಿಯೇಟ್ ಮಾಡುವ ಪಾತ್ರ. ದರ್ಶನ್ ನನ್ನ ದತ್ತು ಮಗ ಅಲ್ಲ ಸ್ವಂತ ಮಗನೇ. ನಾನು ಈ ಚಿತ್ರದಲ್ಲಿ ರಾಜಮಾತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.