ಬೆಂಗಳೂರು: ಸಿದ್ದರಾಮಯ್ಯನವರೇ, ನಾಡಿನ ಜನತೆಗೆ ಕೆಲಸ ಮಾಡಿ ಎಂದು ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.
ಕೊರೋನಾ ವಿಚಾರದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರ ನೆಮ್ಮದಿ ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೊಪಿಸಿದ್ದು, ಸರ್ಕಾರ ಮತ್ತು ಕೊರೊನಾ ಯೋಧರಿಗೆ ಮಸಿ ಬಳಿಯುವ ಈ ದುಷ್ಕೃತ್ಯವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಸಚಿವರು ಹೇಳಿದ್ದಾರೆ.
ಶ್ರೀರಾಮುಲು ಟ್ವೀಟ್ ಮಾಡಿ, @ssiddaramaiah ನವರೇ. ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಯಲಿದ್ದಾರೆ, ಕೊರೊನಾವನ್ನು ಗೆಲ್ಲಬೇಕಿದೆ, ಇದು ಕೆಲಸ ಮಾಡೋ ಸಮಯ, ನಾಡಿನ ಜನತೆಗೆ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಟ ಮಟ್ಟದ ಸಹಕಾರವನ್ನು ಜನತೆಯ ಪರವಾಗಿ ಕೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲರೂ ಯೋಧರೇ. ಕ್ಷುಲ್ಲಕ ರಾಜಕಾರಣಕ್ಕಾಗಿ ಸುಳ್ಳು ಸುದ್ದಿ ಹರಡುವ, ಇಡೀ ಸಮಾಜ ಒಗ್ಗಟ್ಟಿನಿಂದ ಇರಬೇಕಾದ ಈ ಸಂದರ್ಭದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ, ಹಗಲಿರುಳು ದುಡಿಯುತ್ತಿರುವ ಸರ್ಕಾರ ಮತ್ತು ಕೊರೊನಾ ಯೋಧರಿಗೆ ಮಸಿ ಬಳಿಯುವ ಈ ದುಷ್ಕೃತ್ಯವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯದ ಒಗ್ಗಟ್ಟಿಗಾಗಿ ಶ್ರಮಿಸಬೇಕೆಂದು ಕೇಳಿಕೊಂಡಿದ್ದಾರೆ.