ಗಂಗಾವತಿ:ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದವರು ಸೋಮವಾರ ಸಿಐಟಿಯು ನೇತೃತ್ವದಲ್ಲಿ ಗಂಗಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಮುಖ್ಯಾಧಿಕಾರಿ ಡಾ|| ಮೋಹನ್ ಕುಮಾರ್ ಹಾಗೂ ತಾಲೂಕು ಪಂಚಾಯತಿ ಅಧ್ಯಕ್ಷ ಮೊಮ್ಮದ್ ರಫಿ ಇವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಹೇರೂರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕೊರೋನ ವಾರಿಯರ್ಸ್ ಗಳೆಂದು ಪರಿಗಣಿಸಬೇಕು, ಎಲ್ಲಾ ಸಿಬ್ಬಂದಿಗಳ ವೇತನಕ್ಕಾಗಿ ಕೊರತೆಯಿರುವ ೩೮೨ ಕೋಟಿ ರೂ. ಹಣವನ್ನು ಬೇರೆ ಬೇರೆ ಯೋಜನೆಗಳಿಂದ ಕ್ರೋಡಿಕರಿಸಬೇಕು, ಕಂಪ್ಯೂಟರ್ ಆಪರೇಟರ್ ಗಳಿಗೆ ವೃಂದ ಮತ್ತು ನೇಮಕಾತಿಗಳಲ್ಲಿ ತಿದ್ದುಪಡಿ ಮಾಡಬೇಕು, ಲೆಕ್ಕ ಸಹಾಯಕ ಹುದ್ದೆಗಳಿಗೆ ಶೇ. ೩೦ರಷ್ಟು ಮೀಸಲಾತಿ ತರಬೇಕು, ವೈದ್ಯಕೀಯ ವೆಚ್ಚ ಸಿಗಬೇಕು, ೧೪ನೇ ಹಣಕಾಸು ಆಯೋಗದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿಗೆ ವೇತನ ನೀಡಬೇಕು, ಇಲ್ಲಿಯವರೆಗೆ ವೇತನ ನೀಡದಿರುವ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮಂಜುನಾಥ, ಸಹ ಕಾರ್ಯದರ್ಶಿ ಪವನ್ ಕುಮಾರ್ ಹಾಗೂ ಪದಾಧಿಕಾರಿಗಳು, ಗ್ರಾಮಪಂಚಾಯತಿಯ ನೂರಾರು ಸಿಬ್ಬಂದಿಗಳು ಹಾಜರಿದ್ದರು.