ರಾಣೆಬೆನ್ನೂರು, ಡಿ. 09 : ಉತ್ತರದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ವಾಣಿಜ್ಯನಗರಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಅರುಣ್ ಕುಮಾರ್ ಗುತ್ತೂರು ಕಾಂಗ್ರೆಸ್ ಹಿರಿಯ ನಾಯಕ ಕೋಳೀವಾಡ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಆರ್.ಶಂಕರ್ ವಿರುದ್ಧ ಸೋಲನುಭವಿಸಿದ್ದ ಕೋಳಿವಾಡ ಅವರಿಗೆ ಈ ಬಾರಿಯೂ ಸಿಹಿ ದೊರೆತಿಲ್ಲ. ರಾಣೇಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ 26346 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅರುಣಕುಮಾರ ಗುತ್ತೂರ (ಪೂಜಾರ) ಬಿಜೆಪಿ ಅಭ್ಯರ್ಥಿಯಾಗಿದ್ದರೂ ಅಸಲಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಮತ್ತು ಸಿಎಂ ಯಡಿಯೂರಪ್ಪ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬಂದಿತ್ತು.
2018ರ ಚುನಾವಣೆಯಲ್ಲಿ ಕೆಪಿಜೆಪಿ (ಪಕ್ಷೇತರ) ಅಭ್ಯರ್ಥಿಯಾಗಿ ಗೆದ್ದ ಆರ್. ಶಂಕರ್ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ವಿರುದ್ಧ 4338 ಮತಗಳಿಂದ ಗೆದ್ದು ಎರಡು ಬಾರಿ ಮಂತ್ರಿಯೂ ಆಗಿದ್ದರು. ಆದರೆ, ಬಿಜೆಪಿಗೆ ಬೆಂಬಲ ಸೂಚಿಸಿ ತಾಂತ್ರಿಕವಾಗಿ ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದಾರೆ. ಅವರನ್ನು ಎಂಎಲ್ಸಿ ಮಾಡುವ ಭರವಸೆ ನೀಡಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.