ಜೈಪುರ, ಅ.22 : ಬಾಲ್ಯ ವಿವಾಹದಿಂದ ತನ್ನನ್ನು ರಕ್ಷಿಸುವಂತೆ 15 ವರ್ಷದ ಬಾಲಕಿಯೊಬ್ಬಳು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹಾಯದ ಮೊರೆ ಹೋದ ಘಟನೆ ನಡೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ವಿಚಾರಣಾ ಸಭೆಯಲ್ಲಿ ಬಾಲ್ಯ ವಿವಾಹಕ್ಕೆ ಬಲಿಯಾಗಲಿರುವ ಬಗ್ಗೆ ರಾಜ್ಯದ ಟೋಂಕ್ ಜಿಲ್ಲೆಗೆ ಸೇರಿದ ಬಾಲಕಿ ವಿವರಿಸಿದ್ದು, ಸಿಎಂ ಅವರ ಸಹಾಯವನ್ನು ಕೋರಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಹೇಳಿಕೆ ತಿಳಿಸಿದೆ.
ಮನೆಯಲ್ಲಿ ತನ್ನ ತಾಯಿ ತೀರಿಕೊಂಡಿದ್ದಾರೆ. ಹೀಗಾಗಿ ತಂದೆ ನನಗೆ ಈ ವಯಸ್ಸಿನಲ್ಲಿಯೇ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಆ 15 ವರ್ಷದ ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಿದ್ದಾಳೆ ಎನ್ನಲಾಗಿದೆ.